ಹಿಂದು ಧರ್ಮ ರಕ್ಷಣೆಗೆ ಅವತರಿಸಿದ್ದ ಶಂಕರಾಚಾರ್ಯರು

| Published : May 24 2024, 12:50 AM IST

ಸಾರಾಂಶ

ಅಖಂಡ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ ಸ್ಥಾಪಿಸಿ ವೇದಗಳನ್ನು ಸಂರಕ್ಷಿಸುವ ಸಾಕ್ಷಿ ಪ್ರಜ್ಞೆ ಕಾರ್ಯ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ

ಲಕ್ಷ್ಮೇಶ್ವರ: ಸನಾತನ ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ ಧರ್ಮ ಸಂಸ್ಥಾಪನೆ ಮಾಡಿದವರು ಶಂಕರ ಭಗವತ್ಪಾದರು. ಇಂದು ಸನಾತನ ಧರ್ಮ ಉಚ್ಚಾಯ ಸ್ಥಿತಿಯಲ್ಲಿದೆಯೆಂದರೆ ಶಂಕರಾಚಾರ್ಯರೂ ಸೇರಿದಂತೆ ಅನೇಕರ ಕೊಡುಗೆ ಅಪಾರವಾಗಿದೆ ಎಂದು ಬಾಲಚಂದ್ರಭಟ್ ಹುಲಮನಿ ಹೇಳಿದರು.

ಅವರು ಪಟ್ಟಣದ ಶಂಕರಭಾರತಿಮಠ ಸಮುದಾಯ ಭವನದಲ್ಲಿ ಗುರುವಾರ ಬ್ರಹ್ಮವೃಂದದ ವತಿಯಿಂದ ಏರ್ಪಡಿಸಲಾಗಿದ್ದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಪಾಯುಷ್ಯದ ಬದುಕಿನಲ್ಲಿ ಅಗಾಧ ಸಾಧಿಸಿದ ಮಹಾನ್‌ಪುರುಷರು ಶಂಕರಾಚಾರ್ಯರು, ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆ, ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿದ್ದಾರೆ. ಶ್ರೀ ಶಂಕರಾಚಾರ್ಯರ ಜೀವನವೇ ಒಂದು ವೇದಾಂತ. ತಮ್ಮ ಅಲ್ಪಅವಧಿಯಲ್ಲಿ ಸಮಗ್ರ ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಿಂದ ಸಂಚರಿಸಿ, ಅಖಂಡ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ ಸ್ಥಾಪಿಸಿ ವೇದಗಳನ್ನು ಸಂರಕ್ಷಿಸುವ ಸಾಕ್ಷಿ ಪ್ರಜ್ಞೆ ಕಾರ್ಯ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಭಾರತ ದೇಶದಲ್ಲಿ ಹಿಂದೂ ಧರ್ಮ ಬೆಳೆಯಲು ಶಂಕರಾಚಾರ್ಯರು ಮೂಲಕಾರಣಿಕರ್ತರಾಗಿದ್ದಾರೆ. ಅವರನ್ನು ಸ್ಮರಿಸುವದು ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ ಎಂದ ಅವರು, ಬ್ರಾಹ್ಮಣ ಸಮಾಜದಿಂದ ಪ್ರತಿ ವರ್ಷ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ, ಸಮಾಜ ಸಂಘಟನೆ ಜತೆ ಧರ್ಮ ಸಂಘಟನೆ ಕಾರ್ಯ ಮಾಡಲಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ವಹಿಸಿದ್ದರು. ಅತಿಥಿಗಳಾಗಿ ವಿ.ಎಲ್. ಪೂಜಾರ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಗುರುಣ್ಣ ಪಾಟೀಲಕುಲಕರ್ಣಿ, ಪಿ.ಆರ್. ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ದೃವರಾಜ ಬೆಟಗೇರಿ, ಡಿ.ಎಂ. ಪೂಜಾರ, ಅನೂಜಾ ಪೂಜಾರ, ವೀಣಾ ಪಡ್ನೀಸ್, ಮೀನಾಕ್ಷಿ ಸರ್‌ದೇಶಪಾಂಡೆ, ಗಾಯತ್ರಿ ಕುಲಕರ್ಣಿ, ಮಂಜುಳಾ ಸದಾವರ್ತಿ, ಮಂಜುನಾಥ ಸದಾವರ್ತಿ, ರಾಧಾ ಕುಲಕರ್ಣಿ, ಮೇಘನಾ ಸಾಹುಕಾರ ಸೇರಿದಂತೆ ಅನೇಕರಿದ್ದರು. ಡಾ. ಪ್ರಸನ್ನ ಕುಲಕರ್ಣಿ, ಅರವಿಂದ ದೇಶಪಾಂಡೆ, ಕೃಷ್ಣಕುಮಾರ ಕುಲಕರ್ಣಿ ನಿರೂಪಿಸಿದರು.