ಸಾರಾಂಶ
ಹಿಂದೂ ಸಂಸ್ಕೃತಿ, ಭಾರತೀಯ ಉಪನಿಷತ್ತುಗಳ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಸ್ಮರಣೀಯವಾದುದು ಎಂದು ವಿದ್ವಾನ್ ಶಶಿಧರ ಶಾಸ್ತ್ರಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಯಲಹಂಕ
ಹಿಂದೂ ಸಂಸ್ಕೃತಿ, ಭಾರತೀಯ ಉಪನಿಷತ್ತುಗಳ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಸ್ಮರಣೀಯವಾದುದು ಎಂದು ವಿದ್ವಾನ್ ಶಶಿಧರ ಶಾಸ್ತ್ರಿ ಅಭಿಪ್ರಾಯಪಟ್ಟರು.ಯಲಹಂಕ ತಾಲೂಕು ಬ್ರಾಹ್ಮಣ ಸಂಘ ಮತ್ತು ಗಾಯತ್ರಿ ಮಂದಿರ ಇವರ ಸಹಯೋಗದೊಂದಿಗೆ ಯಲಹಂಕದ ಬಜಾರ್ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಪರಶುರಾಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಂಕರಾಚಾರ್ಯರು ಅದ್ವೈತ ವೇದಾಂತ ತತ್ವವನ್ನು ಆದ್ಯತೆ ಮೇಲೆ ಸ್ಥಾಪಿಸುವುದರ ಜತೆಗೆ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದರು. ಅಲ್ಲದೆ ಶತಮಾನಗಳಿಂದ ಪಂಡಿತರು ಧರ್ಮಗ್ರಂಥಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾಚಾರ್ಯರು ಕೈಗೊಂಡರು ಎಂದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಕುಶಾಲ್ ಸಿಂಹ, ರಾಮಾನುಜಾಚಾರ್ಯರ ಬದುಕು ಮತ್ತು ಆಧ್ಯಾತ್ಮ ಸಾಧನೆ ಕುರಿತು ಮಾತನಾಡಿದರು.ಯಲಹಂಕ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥ ಶಾಸ್ತ್ರಿ, ಉಪಾಧ್ಯಕ್ಷ ವೈ.ಜಿ.ರಾಘವೇಂದ್ರರಾವ್, ಆರ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಭೀಮಸೇನಾ ಚಾರ್ಯ, ಖಜಾಂಚಿ ಜಿ.ವಿ.ಪ್ರಭಾಕರ್, ಟಿ.ಎಲ್.ಅರುಣಕುಮಾರ್, ಎಲ್.ಸಂಜೀವರಾವ್ ಇದ್ದರು.