ಉತ್ತಮ ವಿದ್ಯಾಭ್ಯಾಸದಿಂದ ಭವಿಷ್ಯ ರೂಪಿಸಿಕೊಳ್ಳಿ: ಬಿಇಒ ಉಮಾ

| Published : May 26 2025, 12:16 AM IST

ಸಾರಾಂಶ

ಓದಿನ ಮಧ್ಯದಲ್ಲಿ ಶಾಲೆ ಬಿಟ್ಟರೆ ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳು ಹುಟ್ಟಿಕೊಳ್ಳುತ್ತವೆ. ನನ್ನ ಮಗ-ಮಗಳು ಚೆನ್ನಾಗಿ ಓದುತ್ತಿದ್ದಾರೆ. ಅವರನ್ನು ಇನ್ನು ಹೆಚ್ಚಾಗಿ ಓದಿಸಬೇಕೆಂಬ ಹಂಬಲವನ್ನು ತಂದೆ-ತಾಯಿಗಳಲ್ಲಿ ನೀವು ಬೆಳೆಸಬೇಕು. ಆ ನಿಟ್ಟಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇರಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ತಂದೆ ತಾಯಿಗಳು ನಿಮ್ಮನ್ನು ನಂಬಿದ್ದಾರೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಕರೆ ನೀಡಿದರು. ಸಮೀಪದ ಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೊರಾರ್ಜಿ ಶಾಲೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾರ್ಗದರ್ಶನ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಇಲಾಖೆ ಸಹಯೋಗದೊಂದಿಗೆ 150 ಮಕ್ಕಳಿಗೆ ಹಮ್ಮಿಕೊಂಡಿರುವ ಕಲಿಕಾ ಸಿಂಚನ 10ನೇ ತರಗತಿ ಪರೀಕ್ಷೆ-2 ವಿದ್ಯಾರ್ಥಿಗಳಿಗೆ ಉಚಿತ ಸನಿವಾಸ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಓದಿನ ಮಧ್ಯದಲ್ಲಿ ಶಾಲೆ ಬಿಟ್ಟರೆ ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳು ಹುಟ್ಟಿಕೊಳ್ಳುತ್ತವೆ. ನನ್ನ ಮಗ-ಮಗಳು ಚೆನ್ನಾಗಿ ಓದುತ್ತಿದ್ದಾರೆ. ಅವರನ್ನು ಇನ್ನು ಹೆಚ್ಚಾಗಿ ಓದಿಸಬೇಕೆಂಬ ಹಂಬಲವನ್ನು ತಂದೆ-ತಾಯಿಗಳಲ್ಲಿ ನೀವು ಬೆಳೆಸಬೇಕು. ಆ ನಿಟ್ಟಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇರಬೇಕು. ಸರ್ಕಾರದಿಂದ ಆಯೋಜಿಸುವ ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದರು.

ಕ್ಷೇತ್ರ ಸಮನ್ವಾಧಿಕಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹಾಗೂ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಇಸಿಒ, ಬಿಆರ್‌ಪಿ, ಸಿಆರ್‌ಪಿಗಳು, ಕೊಡುಗೈ ದಾನಿಗಳ ಬೆಂಬಲ ಮತ್ತು ಸಹಕಾರದೊಂದಿಗೆ ತರಬೇತಿ ನಡೆಯುತ್ತಿದೆ ಎಂದರು.

ಈ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಮಹದೇವು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಸತೀಶ್, ಮುಖ್ಯ ಶಿಕ್ಷಕರಾದ ದೇವರಾಜು, ತೇಜೋಮಯ, ಸಂತೋಷ್ ಕುಮಾರ್, ಈಶ ಕೃಷ್ಣಮೂರ್ತಿ, ಸಿಆರ್‌ಪಿಗಳಾದ ಜಿ.ಎಸ್.ಕೃಷ್ಣ ಉಪಸ್ಥಿತರಿದ್ದರು.

ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಹಣ ಪಾವತಿಸಲು ಪುಟ್ಟೇಗೌಡ ಆಗ್ರಹ

ಕೆ.ಆರ್.ಪೇಟೆ: ಈ ಹಿಂದಿನ ರಾಜ್ಯ ಸರ್ಕಾರದ ಆದೇಶದಂತೆ ಎಥೆನಾಲ್ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ರೈತರು ಪೂರೈಕೆ ಮಾಡಿರುವ ಪ್ರತಿಟನ್ ಕಬ್ಬಿಗೆ ಹೆಚ್ಚುವರಿ 150 ರು. ಹಾಗೂ ಎಥೆನಾಲ್ ಘಟಕ ಹೊಂದಿರದ ಕಾರ್ಖಾನೆಗಳು 100 ರು. ಪಾವತಿಸುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.

ಹಿಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ ನಿಗದಿತ ಎಫ್.ಆರ್.ಪಿ ದರದ ಮೇಲೆ ಹೆಚ್ಚುವರಿಯಾಗಿ ಎಥೆನಾಲ್ ಘಟಕ ಹೊಂದಿರುವ ಕಾರ್ಖಾನೆಗಳು 150 ರು. ಮತ್ತು ಎಥೆನಾಲ್ ಘಟಕ ಹೊಂದಿಲ್ಲದ ಕಾರ್ಖಾನೆಗಳು 100 ರು. ನೀಡುವಂತೆ ಆದೇಶಿಸಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಆದೇಶದ ವಿರುದ್ಧ ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದವು. ತಡೆಯಾಜ್ಞೆಯನ್ನು ರೈತರು ನ್ಯಾಯಾಲಯದ ಮೊರೆ ಹೋಗಿ ತೆರವುಗೊಳಿಸಿದ್ದರು. ಈ ಹಿಂದಿನ ಸರ್ಕಾರದ ಆದೇಶದಂತೆ ಹೆಚ್ಚುವರಿ ಹಣವನ್ನು ರೈತರಿಗೆ ಕೊಡಿಸಬೇಕಾದ ಜವಾಬ್ದಾರಿ ಈಗಿನ ಕಾಂಗ್ರೆಸ್ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ. ರಾಜ್ಯ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.