ಮೂಢನಂಬಿಕೆಗಳು ಮತ್ತು ಜಾತಿ ಪದ್ದತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಶರಣರ ಪಾತ್ರ ಅಪಾರವಾದುದು ಎಂದು ಶಿಕ್ಷಕ ಪ್ರಶಾಂತ ಕುಬಸದ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಮೂಢನಂಬಿಕೆಗಳು ಮತ್ತು ಜಾತಿ ಪದ್ದತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಶರಣರ ಪಾತ್ರ ಅಪಾರವಾದುದು ಎಂದು ಶಿಕ್ಷಕ ಪ್ರಶಾಂತ ಕುಬಸದ್ ಹೇಳಿದರು.

ಶಿರಾಳಕೊಪ್ಪ ಅಂಬೇಡ್ಕರ್ ವಸತಿ ನಿಲಯದಲ್ಲಿ ಗುರುವಾರ ಶಿರಾಳಕೊಪ್ಪ ಕಸಾಪ ಹೋಬಳಿ ಘಟಕ ಹಮ್ಮಿಕೊಂಡಿದ್ದ ದಿ.ಶೇಖರಯ್ಯ ಮತ್ತು ದಾಕ್ಷಾಯಣಮ್ಮ ದಂಪತಿಗಳ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸತ್ಯಶುದ್ದ ಕಾಯಕದ ಮೂಲಕ ಜೀವನ ನಡೆಸುವ ಅಂದಿನ ಅನೇಕ ವಚನಗಾರರು ತಮ್ಮ ಪರಿಣಾಮಕಾರಿಯಾದ ವಚನಗಳನ್ನು ರೂಪಿಸುವ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ.

ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ, ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್‌ಗೆ ಮಾದರಿ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಮತ್ತೊಂದು ದತ್ತಿ ನಿಧಿ ಕಾರ್ಯಕ್ರಮ ದಿ.ಮೂಕಾಂಬಿಕಾ ಎಣ್ಣೆ ರಾಮಣ್ಣ ಸ್ಮರಣಾರ್ಥ ನೀಡಿದ ಧರ್ಮ ಮತ್ತು ಸಾಹಿತ್ಯ ಕುರಿತು ಶಿಕ್ಷಕ ರಮೇಶ್ ಹಿರೇಜಂಬೂರು ಮಾತನಾಡಿ, ಧರ್ಮ ಮತ್ತು ಸಾಹಿತ್ಯವು ಇತಿಹಾಸದುದ್ದಕ್ಕೂ ಆಳವಾದ ಸಹಜೀವನದ ಸಂಬಂಧವನ್ನು ಹೊಂದಿದ್ದು, ಪರಸ್ಪರ ಸಾಂಸ್ಕ್ರತಿಕ ಹಾಗೂ ಆಧ್ಯಾತ್ಮಿಕ ತಿಳುವಳಿಕೆಯನ್ನು ವೃದ್ದಿಸಿವೆ ಎಂದರು.

ಧಾರ್ಮಿಕ ನಂಬಿಕೆಗಳು ಸಾಹಿತ್ಯಕ್ಕೆ ಸ್ಪೂರ್ತಿಯಾದರೆ, ಸಾಹಿತ್ಯವು ಧರ್ಮದ ಸಂದೇಶಗಳನ್ನು ಸಂಕೇತಗಳ ಮೂಲಕ ಜನರಿಗೆ ತಲಪಿಸುತ್ತದೆ. ಮಹಾಕಾವ್ಯಗಳು, ವಚನಗಳು ಮತ್ತು ಪುರಾಣಗಳು ಧರ್ಮ ಮತ್ತು ಸಾಹಿತ್ಯದ ಸಮ್ಮಿಲನಕ್ಕೆ ಸಾಕ್ಷಿ ಆಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಪ ಘಟಕದ ಅಧ್ಯಕ್ಷ ಟಿ.ಎಂ.ಮಂಜುನಾಥ ವಹಿಸಿದ್ದರು. ವಸತಿ ನಿಲಯದ ನಿಲಯ ಪಾಲಕ ಪ್ರಭು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಚಂದ್ರಶೇಖರ ಸುರಹೊನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗಂಗಾಧರ ನಾಯರ್ ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಶಿಕ್ಷಕ ಮೌನೇಶ್ ಸ್ವಾಗತಿಸಿ, ನಿವೃತ್ತ ಸೈನಿಕ ಕೃಷ್ಣಮೂರ್ತಿ ವಂದಿಸಿ, ನಿವೃತ್ತ ಶಿಕ್ಷಕ ಪಾಂಡುರಂಗ ಜನ್ನು ನಿರೂಪಿಸಿದರು.