ಶರಣ ಸಾಹಿತ್ಯ ಕರ್ನಾಟಕ ಜಗತ್ತಿಗೆ ನೀಡಿದ ಅಪ್ರತಿಮ ಕೊಡುಗೆಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ನುಡಿದರು.

ರಾಣಿಬೆನ್ನೂರು: ಶರಣ ಸಾಹಿತ್ಯ ಕರ್ನಾಟಕ ಜಗತ್ತಿಗೆ ನೀಡಿದ ಅಪ್ರತಿಮ ಕೊಡುಗೆಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ನುಡಿದರು. ನಗರದ ಎಪಿಎಂಸಿ ರಸ್ತೆ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 21ನೇ ಶತಮಾನದಲ್ಲಿ ಸಂವಿಧಾನದಡಿ ಕೈಗೊಳ್ಳಬೇಕಾದ ಸುಧಾರಣೆಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಾಧಿಸಿ ತೋರಿಸಿದರು. ಇಂದಿನ ಯಾವುದೇ ಪ್ರಕಾರದ ಮಾಧ್ಯಮಗಳಿಲ್ಲದ ಸಮಯದಲ್ಲಿ ಕಾಶಿಯಿಂದ ಒಬ್ಬ ಮಹಾರಾಜ ಕಲ್ಯಾಣಕ್ಕೆ ಬಂದು ಶರಣಾದರು. ಸರಳವಾದ ಸುಂದರ ಸಂದೇಶಗಳನ್ನು ವಚನಗಳ ಮೂಲಕ ಪ್ರಚುರ ಪಡಿಸಿದರು. ವಚನಗಳಿಗೆ ಯಾವುದೇ ವ್ಯಾಖ್ಯಾನದ ಅಗತ್ಯವಿಲ್ಲ. ಮನುಷ್ಯ ಭಗವಂತನಿಗೆ ಸಮರ್ಪಣೆ ಮಾಡಿದಾಗ ಅವನ ಒಲುಮೆ ಪ್ರಾಪ್ತಿ ಎಂಬುದನ್ನು ವಚನಗಳು ತಿಳಿಸಿವೆ. ವಚನಗಳಲ್ಲಿ ಸಾಮಾಜಿಕ ಮೌಲ್ಯಗಳಿವೆ. ವಚನಗಳ ಸಂರಕ್ಷಣೆ ಮಾಡುವುದು 12ನೇ ಶತಮಾನದಲ್ಲಿ ದೊಡ್ಡ ಸವಾಲಾಗಿತ್ತು. ಮನುಷ್ಯನಿಗೆ ಬೇಕಾದುದನ್ನು ನೀಡುವ ಶಕ್ತಿ ವಚನ ಸಾಹಿತ್ಯದಲ್ಲಿದೆ ಎಂದರು.ಸಮ್ಮೇಳನ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ವಚನ ಸಾಹಿತ್ಯ ಕೇವಲ ಒಂದು ಕಾವ್ಯವಾಗಿರದೆ ಅದು ಪ್ರತಿ ಮನುಷ್ಯನಿಗೆ ಮಾರ್ಗಸೂಚಿಯಾಗಿದೆ. ಪ್ರಾಣಿ, ಪಕ್ಷಿಗಳಲ್ಲಿ ಇರುವ ಒಗ್ಗಟ್ಟು ಮನುಷ್ಯರಲ್ಲಿ ಇಲ್ಲ. 12ನೇ ಶತಮಾನ ಮೂಢನಂಬಿಕೆ ಕಾಲವಾಗಿದ್ದ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಗೌರವ ನೀಡಲಾಗಿತ್ತು. ನಾವೆಲ್ಲರೂ ಇಂತಹ ಧರ್ಮ ಸಭೆಗಳಲ್ಲಿ ಪಾಲ್ಗೊಂಡು ಶರಣರ ಸಂದೇಶ ಪಾಲನೆ ಮಾಡಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸೋಮಶೇಖರ ಮಾತನಾಡಿ, ವಚನಗಳು ಕಾವ್ಯವಲ್ಲ, ನಾಟಕಗಳಲ್ಲ ಅವು ಅಂತರಂಗದ ಅಭಿಮಾನ. ನೋವು ನಲಿವುಗಳನ್ನು ಅರ್ಥಮಾಡಿಕೊಂಡು ರಚನೆ ಮಾಡಿದ ವಚನ ಸಾಹಿತ್ಯದ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಿದರೆ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವಿದೆ. ಬಸವಾದಿ ಶರಣರು ವಿಶ್ವಮಾನವತ್ವ ಹಾಗೂ ಸ್ತ್ರೀಸಮಾನತೆಯನ್ನು ಸಾರಿದರು. ಕಾಯಕ ಸಿದ್ಧಾಂತವನ್ನು ನೀಡಿದರು. ಜಾತ್ಯತೀತ ಪ್ರಜ್ಞೆಯನ್ನು ಬೆಳೆಸಿದರು ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಆಶಯ ನುಡಿ ತಿಳಿಸಿದರು. ಶ್ರೀ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ. ಪಂಡಿತರಾಧ್ಯ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಗುಡ್ಡದ ಆನ್ವೇರಿ ವಿರಕ್ತ ಮಠದ ಶಿವಯೋಗಿ ಶಿವಾಚಾರ್ಯರು, ಸ್ಥಳೀಯ ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಸಮ್ಮುಖರಾಗಿದ್ದರು. ಶರಣ ಸಾಹಿತ್ಯ ಪರಿಷತ್ತ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ, ವಾಸಣ್ಣ ಕುಸಗೂರ, ಜಿ.ಬಿ. ಮಾಸಣಗಿ, ರುಕ್ಮಿಣಿ ಸಾವಕಾರ, ಜಿ.ಜಿ. ಹೊಟ್ಟಿಗೌಡ್ರ, ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಜಂಬಗಿ, ವಿನೋದ ಜಂಬಗಿ ಅತಿಥಿಗಳಾಗಿ ಆಗಮಿಸಿದ್ದರು. ರಜನಿ ಕರಿಗಾರ ವಚನ ಸಾಹಿತ್ಯ ಪ್ರಸ್ತುತ ಪಡಿಸಿದರು. ದಾನೇಶ್ವರಿ ಸೂರಣಗಿ ವಚನ ನೃತ್ಯ ಪ್ರದರ್ಶಿಸಿದರು. ತಾಲೂಕ ಶಸಾಪ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಸ್ವಾಗತಿಸಿದರು. ಜಯಶ್ರೀ ನೀರಲಗಿಮಠ, ಜಗದೀಶ ಮಳೇಮಠ ನಿರೂಪಿಸಿದರು, ಎಸ್.ಎಚ್. ಪಾಟೀಲ ವಂದಿಸಿದರು.