ಸಾರಾಂಶ
ಶಿವಮೊಗ್ಗ: ಪರಮ ತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 113ನೇ ಪುಣ್ಯ ಸ್ಮರಣೋತ್ಸವ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.16, 17 ಮತ್ತು 18 ರಂದು ನಗರದ ಶ್ರೀ ಬೆಕ್ಕಿನಕಲ್ಮಠದ ಶ್ರೀ ಗುರುಬಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮನ್ಮಹಾರಾಜ್ ನಿರಂಜನ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.16 ಬೆಳಗ್ಗೆ 10 ಗಂಟೆಗೆ ಸಾಗರ ತಾಲೂಕು ಮುರುಘಾಮಠದ ಡಾ.ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾಂಸ್ಕೃತಿಕ ವಚನ ಗಾಯನ ಸ್ಪರ್ಧೆಗಳನ್ನು ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.ಅಂದು ಸಂಜೆ 5 ಗಂಟೆಗೆ 544ನೇ ಅನುಭಾವ ಸಮ್ಮೇಳನ ಹಾಗೂ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೆರವೇರಿಸಲಿದ್ದಾರೆ. ಅಕ್ಕಮಹಾದೇವಿ ಪ್ರಶಸ್ತಿಯನ್ನು ಹೊನ್ನಾವರದ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮಾ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.ಜ.17 ರಂದು ಬೆಳಗ್ಗೆ 10 ಗಂಟೆಗೆ ಸಾಂಸ್ಕೃತಿಕ ರಂಗೋಲಿ ಹಾಗೂ ಜಾನಪದ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಂದು ಸಂಜೆ 5 ಗಂಟೆಗೆ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಅಲ್ಲಮಪ್ರಭು ಪ್ರಶಸ್ತಿ ಪ್ರದಾನ ಸಮಾರಭ ಏರ್ಪಡಿಸಲಾಗಿದೆ. ಈ ಸಮಾರಂಭವನ್ನು ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸುವರು. ಅಲ್ಲಮಪ್ರಭು ಪ್ರಶಸ್ತಿಗೆ ಧಾರವಾಡ ಡಾ.ವೀರಣ್ಣ ರಾಜೂರ ಅವರು ಭಾಜನರಾಗಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಜ.18ರಂದು ಬೆಳಗ್ಗೆ ಜಿಲ್ಲಾಮಟ್ಟದ ಭಜನೆ ಹಾಗೂ ಆನ್ಲೈನ್ ಪ್ರಶ್ನೋತ್ತರ ಸ್ಪರ್ಧೆಗಳು ಮತ್ತು ಸಂಜೆ ಮಕ್ಕಳಿಗೆ ಮಹಾಪುರುಷರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಈ ಬಾರಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾರಭರಣ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.ಈ ಮೂರು ದಿನದ ಎಲ್ಲಾ ಕಾರ್ಯಕ್ರಮಗಳಲ್ಲೂ ವಿವಿಧ ಮಠಗಳ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮಠದ ಭಕ್ತರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಪರಮ ತಪಸ್ವಿ ಲಿಂ.ಜಗದ್ಗುರು ಶ್ರೀ ಗುರುಬಸವ ಸ್ಮಾಮೀಜಿ, 113ನೇ ಪುಣ್ಯ ಸ್ಮರಣೋತ್ಸವ ಸಮಿತಿಯ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿದ್ವಾನ್ ಡಾ.ಸಿ.ರೇಣುಕಾರಾಧ್ಯ, ಎಚ್.ಎಂ.ಚಂದ್ರಶೇಖರಪ್ಪ, ಉಮೇಶ್ ಆರಾಧ್ಯ, ಕೆ.ಆರ್.ಸೋಮನಾಥ್, ರತ್ನಾಕರ್, ಬಳ್ಳೆಕೆರೆ ಸಂತೋಷ್, ಶಿವರಾಜ್. ಜಯಪ್ಪ, ಶಾಂತಾ ಆನಂದ್, ಕಿರಣ್ ದೇಸಾಯಿ, ರತ್ನಾ ಮಂಜುನಾಥ್ ಮತ್ತಿತರರು ಇದ್ದರು.