ಗಜೇಂದ್ರಗಡ: ಅಸಮಾನತೆ, ಜಾತಿ ಪದ್ಧತಿ ಹಾಗೂ ಮೂಢನಂಬಿಕೆ ವಿರುದ್ಧ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮಸಮಾಜ ಕಟ್ಟಲು ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅನನ್ಯ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ತಿಳಿಸಿದರು.
ಸ್ಥಳೀಯ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಸರಳ ಜೀವನ ಜತೆಗೆ ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಜಗತ್ತಿಗೆ ಪರಿಚಯಿಸಿದ ಕಾಯಕ ಶರಣರ ವಚನಗಳು ಇಂದಿಗೂ ಜನಮಾನಸದಲ್ಲಿ ಚಿರಪರಿಚಿತವಾಗಿವೆ. ಇಂದಿನ ಪಾರ್ಲಿಮೆಂಟ್ ಮಾದರಿಯನ್ನು ೧೨ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮೂಲಕ ಎಲ್ಲರು ಸಮಾನರು ಎಂದು ಸಾರಿದ್ದರು ಎಂದರು.ಮುಖಂಡರಾದ ಶರಣು ಪೂಜಾರ ಹಾಗೂ ಬಸವರಾಜ ಕೊಟಗಿ ಮಾತನಾಡಿ, ೧೨ನೇ ಶತಮಾನವು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಕ್ರಾಂತಿ ಮಾಡಿತ್ತು. ಪರಿಣಾಮ ಬಸವೇಶ್ವರರ ಸಮಾನತೆಯ ತತ್ವಾಗಿದ್ದು, ಅವರ ಹಾದಿಯಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿಯವರು ಶರಣ ಪಡೆಯ ಅಗ್ರಗಣ್ಯರಲ್ಲಿದ್ದರು ಎಂದರು.ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕಡಬಿನ ಮಾತನಾಡಿದರು. ಮುಖಂಡರಾದ ರವಿ ಗಡೇದವರ, ನೀಲಪ್ಪ ಗುಡಿಮನಿ, ಮರಿಯಪ್ಪ ಮಾದರ, ಆನಂದ ಮಾದರ, ಗುರುಲಿಂಗಯ್ಯ ಓದುಸುಮಠ, ಕಳಕಯ್ಯ ಸಾಲಿಮಠ, ಸಾಗರ ವಾಲಿ, ಶರಣು ಹಡಪದ, ಮೈಲಾರಪ್ಪ ಮೂಲಮನಿ, ಮುತ್ತು ಮಾದರ, ಮುತ್ತವ್ವ ಚಲವಾದಿ, ಬಸವರಾಜ ಹೊಸಮನಿ, ಮಂಜು ಗುಡಿಮನಿ, ಶರಣು ಅರಳಿಗಿಡದ, ರಮೇಶ ಕಡಬಿನ, ಮಾರುತಿ ಮಾದರ, ಮಾಳವ್ವ ಅರಳಿಗಿಡದ, ಅಂದಪ್ಪ ರಾಠೋಡ, ಬಸವರಾಜ ಅಂಗಡಿ, ಬಸವರಾಜ ಹೊಳಗಿ ಇತರರು ಇದ್ದರು.