ಸನಾತನ ಸಂಸ್ಕೃತಿ ರಕ್ಷಣೆ ಧ್ಯೇಯದೊಂದಿಗೆ ಶರನ್ನವರಾತ್ರಿ ಆಚರಣೆ

| Published : Sep 21 2025, 02:00 AM IST

ಸನಾತನ ಸಂಸ್ಕೃತಿ ರಕ್ಷಣೆ ಧ್ಯೇಯದೊಂದಿಗೆ ಶರನ್ನವರಾತ್ರಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರುಭದ್ರಾನದಿ ತಟದಲ್ಲಿರುವ ಬಾಳೆಹೊನ್ನೂರಿನಲ್ಲಿ ಕಳೆದ 15 ವರ್ಷಗಳ ಹಿಂದೆ ಆರಂಭಿಸಿದ ಶರನ್ನವರಾತ್ರಿ ಮಹೋತ್ಸವ ಇಂದು ಯಶಸ್ವಿಯಾಗಿ ನಡೆಯುತ್ತಿದ್ದು, ಅತ್ಯಲ್ಪ ಕಾಲದಲ್ಲಿ ಜಿಲ್ಲೆಯಲ್ಲಿಯೇ ಗಮನಸೆಳೆದಿದೆ. ಈ ಬಾರಿ ಷೋಡಶ ವರ್ಷದ ಕಾರ್ಯ ಕ್ರಮದ ಸಂಭ್ರಮಕ್ಕೆ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಧರ್ಮಾವಲಂಭಿತ ಕಾರ್ಯಕ್ರಮಗಳಿಗೆ ಸೀಮಿತಗೊಂಡ ದುರ್ಗಾ ಉತ್ಸವನಾಳೆಯಿಂದ ಉತ್ಸವಕ್ಕೆ ವಿದ್ಯುಕ್ತ ಚಾಲನೆ । ವಿಜಯದಶಮಿಯಂದು 15000 ಭಕ್ತರಿಗೆ ಅನ್ನಸಂತರ್ಪಣೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭದ್ರಾನದಿ ತಟದಲ್ಲಿರುವ ಬಾಳೆಹೊನ್ನೂರಿನಲ್ಲಿ ಕಳೆದ 15 ವರ್ಷಗಳ ಹಿಂದೆ ಆರಂಭಿಸಿದ ಶರನ್ನವರಾತ್ರಿ ಮಹೋತ್ಸವ ಇಂದು ಯಶಸ್ವಿಯಾಗಿ ನಡೆಯುತ್ತಿದ್ದು, ಅತ್ಯಲ್ಪ ಕಾಲದಲ್ಲಿ ಜಿಲ್ಲೆಯಲ್ಲಿಯೇ ಗಮನಸೆಳೆದಿದೆ. ಈ ಬಾರಿ ಷೋಡಶ ವರ್ಷದ ಕಾರ್ಯ ಕ್ರಮದ ಸಂಭ್ರಮಕ್ಕೆ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನ ಆವರಣದಲ್ಲಿ ಕ್ಷೇತ್ರದ ಅಧಿದೇವತೆ ಮೃತ್ಯಂಬಿಕಾ ಅಮ್ಮನ ಸನ್ನಿಧಿಯಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 2010ರಲ್ಲಿ ಕೇವಲ ಧಾರ್ಮಿಕ ನೆಲೆಗಟ್ಟಿನಲ್ಲಿ ಆರಂಭಿಸಿದ ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವ ಧರ್ಮಾವಲಂಬಿತ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದು ಮತ್ತೊಂದು ವಿಶೇಷ. ಆಧುನಿಕ ದಿನಗಳಲ್ಲಿ ಯುವಜನರಿಂದ ದೂರವಾಗುತ್ತಿರುವ ದೇಶದ ಭವ್ಯ ಸಂಸ್ಕೃತಿ, ಸಂಪ್ರದಾಯ ರಕ್ಷಿಸಿ ಮುಂದಿನ ಪೀಳಿಗೆಗೂ ನೀಡಬೇಕೆಂಬ ಏಕೈಕ ಸದುದ್ದೇಶದಿಂದ ಆರಂಭಿಸಿದ ಉತ್ಸವ ಇಂದು ಸಂಸ್ಕೃತಿ, ಸಂಪ್ರದಾಯ ರಕ್ಷಿಸುತ್ತಾ ಹಲವರ ಮನ ಪರಿವರ್ತನೆಗೂ ಸಾಕ್ಷಿಯಾಗಿದೆ.ಸಮಾನ ಮನಸ್ಕ ಹಾಗೂ ಯುವಪಡೆಯನ್ನೇ ಹೊಂದಿರುವ ನವರಾತ್ರಿ ಪೂಜಾ ಸಮಿತಿ ಅತ್ಯಂತ ಶ್ರದ್ಧೆಯಿಂದ ಕಾರ್ಯಕ್ರಮ ನಡೆಸುತ್ತಿದೆ. ಧಾರ್ಮಿಕ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನಡೆಸುತ್ತಾ ದುರ್ಗೆಯ ಕೃಪೆಗೆ ಪಾತ್ರರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮಿತಿ ಪದಾಧಿಕಾರಿಗಳು ನವರಾತ್ರಿ ಆಚರಣೆ ಸಂದರ್ಭದಲ್ಲಿ ಸಂಪ್ರದಾಯಬದ್ಧವಾಗಿದ್ದು, ಬ್ರಹ್ಮಚರ್ಯ, ಸಾತ್ವಿಕ ಆಹಾರ, ಸಾಂಪ್ರದಾಯಿಕ ಉಡುಗೆ ತೊಡುಗೆ ತೊಡುವುದು ವಿಶೇಷ.

ಉತ್ಸವದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರತಿನಿತ್ಯ ಸಪ್ತಶತೀ ಪಾರಾಯಾಣ, ದುರ್ಗಾಹೋಮ, ಹೂವಿನ ಪೂಜೆಗಳನ್ನು ನಡೆಸುತ್ತಿದ್ದು, 3ನೇ ವರ್ಷದ ಉತ್ಸವದಿಂದ ನಿತ್ಯ ಮಧ್ಯಾಹ್ನ ಆಗಮಿಸುವ 2500-3000 ಭಕ್ತರಿಗೆ ಅನ್ನಸಂತರ್ಪಣೆ, ವಿಜಯ ದಶಮಿ ದಿನ 15000ಕ್ಕೂ ಅಧಿಕ ಭಕ್ತರಿಗೆ ಗ್ರಾಮೀಣ ಪ್ರದೇಶದಲ್ಲಿ ಅನ್ನ ಸಂತರ್ಪಣೆ ಮಾಡುವುದು ಶ್ಲಾಘನೀಯ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ, ಅಬ್ಬರದ ಸಂಗೀತಕ್ಕೆ ಸಂಪೂರ್ಣ ಕಡಿವಾಣ ಹಾಕಿ ಭಾರತೀಯ ಪುರಾತನ ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ದೇಶಾಭಿಮಾನದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅಚ್ಚುಕಟ್ಟಾಗಿ ನಡೆಸುತ್ತಿದೆ.ಆಯುಧ ಪೂಜೆ ದಿನ ನಾಡಿನ ವಿವಿಧ ಭಾಗಗಳ ಮಠಾಧೀಶರಿಂದ ಆಶೀರ್ವಚನ ನೀಡುವರು. ಈವರೆಗೆ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು, ತರೀಕೆರೆ ಹಣ್ಣೆಮಠದ ಶ್ರೀ, ಬೇಲೂರು ಪುಷ್ಟಗಿರಿಯ ಶ್ರೀ, ಶೃಂಗೇರಿ ಗುಣನಾಥ ಸ್ವಾಮೀಜಿ, ಆಯುರಾಶ್ರಮದ ಸಂತೋಷ್ ಗುರೂಜಿ, ವಜ್ರದೇಹಿಮಠದ ರಾಜಶೇಖರಾನಂದ ಸ್ವಾಮೀಜಿ, ಬೀರೂರು ರುದ್ರ ಮುನಿ ಸ್ವಾಮೀಜಿ, ವಿಶ್ವಕರ್ಮ ಪೀಠದ ಸುಜ್ಞಾನಪ್ರಭು ಸ್ವಾಮೀಜಿ, ಕುಪ್ಪೂರು ಡಾ.ಯತೀಶ್ವರ ಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಾಚಾರ್ಯ, ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಸಾಮೀಜಿ, ಬ್ರಹ್ಮಾಂಡ ಖ್ಯಾತಿ ನರೇಂದ್ರ ಬಾಬು ಶರ್ಮಾ, ಖಾಸ್ಗತೇಶ್ವರ ಮಠದ ಸಿದ್ದಲಿಂಗ ಶ್ರೀ, ಉಡುಪಿ ಪೇಜಾವರ ಶ್ರೀ ಭೇಟಿ ನೀಡಿದ್ದಾರೆ. ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ವಿಲಾಸ್‌ನಾಯಕ್ ಮತ್ತಿತರರು ಉಪನ್ಯಾಸ ನೀಡಿದ್ದಾರೆ.ಪ್ರತಿವರ್ಷ ಸಾಧಕ ಪ್ರತಿನಿಧಿಗಳಿಗೆ ದುರ್ಗಾ ರಕ್ಷೆ ನೀಡಿ, ಸನ್ಮಾನ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅಂತಿಮ ದಿನ ದುರ್ಗಾದೇವಿ ಜಲಸ್ತಂಭನಾ ಶೋಭಾಯಾತ್ರೆಯಲ್ಲಿ ದೇಶದ 20ಕ್ಕೂ ಅಧಿಕ ವಿವಿಧ ಕಲಾ ಪ್ರಾಕಾರಗಳನ್ನು ಕರೆಯಿಸಿ ಸ್ಥಳೀಯರಿಗೆ ಪರಿಚಯಿಸಲಾಗುತ್ತಿದೆ. ಕಳೆದ ವರ್ಷದಿಂದ ಸಮಿತಿ ಊರಿನ ಜೀವನದಿ ಭದ್ರೆಗೆ ಕಾಶಿ ಗಂಗಾರತಿ ಮಾದರಿಯಲ್ಲಿ ಭದ್ರಾ ಆರತಿ ಎಂಬ ವಿಶೇಷ ಕಾರ್ಯಕ್ರಮ ಆರಂಭಿಸಿದೆ. ದುರ್ಗಾ ವಿಗ್ರಹದ ಜಲಸ್ತಂಭನಕ್ಕೂ ಮುನ್ನ ಭದ್ರಾರತಿ ನಡೆಯಲಿದೆ.ಧರ್ಮ, ಸಂಸ್ಕೃತಿ, ಸಂಪ್ರದಾಯ ರಕ್ಷಣೆ ಧ್ಯೇಯದೊಂದಿಗೆ ಆರಂಭಗೊಂಡ ಶರನ್ನವರಾತ್ರಿ ಮಹೋತ್ಸವ ಗ್ರಾಮೀಣ ಪ್ರದೇಶ ದಲ್ಲಿ ಅಚ್ಚುಕಟ್ಟಾಗಿ ನಡೆದು ಭಕ್ತರ ಮನಗೆಲ್ಲುತ್ತಿದೆ. ಈ ಬಾರಿ 16ನೇ ವರ್ಷದ ಉತ್ಸವಕ್ಕೆ ಸಮಿತಿ ಸಿದ್ಧಗೊಂಡಿದ್ದು, ಉತ್ಸವ ಕಾರ್ಯಗಳು ಭರದಿಂದ ನಡೆದಿವೆ.ಸೆ.22ರಂದು ಪಟ್ಟಣದಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಬೃಹತ್ ದುರ್ಗಾಮಂಟಪ ನಿರ್ಮಾಣ ವಾಗಿದೆ. ಪಟ್ಟಣದ ಮುಖ್ಯರಸ್ತೆ, ಮಾರ್ಕಾಂಡೇಶ್ವರ ದೇಗುಲದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ಸ್ಥಳ ವಿಶೇಷ: ಬಾಳೆಹೊನ್ನೂರಿನ ಪ್ರಮುಖ ದೇವಾಲಯಗಳಲ್ಲೊಂದಾದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜಾ ಸೇವೆ ನಡೆಯುತ್ತದೆ. ಮಹಾಶಿವರಾತ್ರಿ, ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ.ಈ ದೇವಾಲಯ ಆವರಣದಲ್ಲಿ ಅಧಿದೇವತೆ ಮೃತ್ಯಂಬಿಕಾ ಅಮ್ಮನ ದೇಗುಲವಿದ್ದು, ಪ್ರತೀ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ. ಇಲ್ಲಿ ದರ್ಶನ ಪಾತ್ರಿಯಿಂದ ಹೇಳಿಕೆ, ಕೇಳಿಕೆ ನಡೆಯಲಿದ್ದು, ಪ್ರತೀ ವಾರ ನೂರಾರು ಭಕ್ತರು ಪಾತ್ರಿಯಿಂದ ಹೇಳಿಕೆ ಪಡೆಯಲಿದ್ದಾರೆ. ಪಕ್ಕದಲ್ಲಿರುವ ಮಾರಿಯಮ್ಮನ ಗುಡಿಯಲ್ಲೂ ವಿಶೇಷ ಪೂಜೆ ನಡೆದು, ಆರೋಗ್ಯ ಮತ್ತಿತರ ಸಮಸ್ಯೆ ಗಳಿಗೆ ಹರಕೆ ಸೇವೆ ನಡೆಯುತ್ತದೆ. ಮಾರ್ಕಾಂಡೇಶ್ವರ ದೇಗುಲದ ಸನಿಹವೇ ನವಗ್ರಹ ಗುಡಿ, ನಾಗಬನಗಳಿದ್ದು ಪ್ರತೀ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಒಟ್ಟಾರೆ ಮಾರ್ಕಾಂಡೇಶ್ವರ ದೇವಸ್ಥಾನ ಪವಿತ್ರ ಧಾರ್ಮಿಕ ಸ್ಥಳ. ನವರಾತ್ರಿ ಉತ್ಸವಕ್ಕೆ ಇನ್ನಷ್ಟು ಕಳೆಗಟ್ಟಿ ನಿಂತಿದೆ.-- ಕೋಟ್ --ಕಳೆದ 15 ವರ್ಷಗಳಿಗಿಂತ ಈ ವರ್ಷದ ಉತ್ಸವ ಯಶಸ್ವಿಯಾಗಿ ಮತ್ತು ವಿಭಿನ್ನವಾಗಿ ನಡೆಸಬೇಕು ಎಂಬ ಉದ್ದೇಶದಿಂದ ಸಮಿತಿ ಹಲವು ವಿಶೇಷತೆಯೊಂದಿಗೆ ಕಾರ್ಯಕ್ರಮ ರೂಪುಗೊಳಿಸಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಯಾಗಿದೆ. ಸೆ.22ರಂದು ಹೊರನಾಡು ದೇಗುಲದಿಂದ ಬಾಗಿನ ಸಮರ್ಪಿಸಿ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಭಕ್ತರು ಪ್ರತಿದಿನದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರುವ ಮೂಲಕ ಧರ್ಮ, ಪರಂಪರೆ, ಸಂಸ್ಕೃತಿ ಉಳಿವಿಗೆ ಕೈಜೋಡಿಸಬೇಕಿದೆ.- ಆರ್.ಡಿ.ಮಹೇಂದ್ರ,

ಪ್ರಧಾನ ಕಾರ್ಯದರ್ಶಿ, ನವರಾತ್ರಿ ಸಮಿತಿ. ೨೦ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ದುರ್ಗಾದೇವಿ ನವರಾತ್ರಿ ಮಹೋತ್ಸವಕ್ಕೆ ಸಿದ್ದಗೊಂಡಿರುವ ಬೃಹತ್ ದುರ್ಗಾಮಂಟಪ.೨೦ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಮೃತ್ಯಂಬಿಕಾ ಅಮ್ಮನವರು

೨೦ಬಿಹೆಚ್‌ಆರ್ ೪: ಆರ್.ಡಿ.ಮಹೇಂದ್ರ (ಪ್ರಧಾನ ಕಾರ್ಯದರ್ಶಿ)