ಸಾರಾಂಶ
ಮಹಿಳೆಯರಿಗೂ ಕೂಡ ಧಾರ್ಮಿಕ ಸಂಸ್ಕಾರ ಕೊಡಬಹುದು, ಅವರೂ ಆಧ್ಯಾತ್ಮಿಕವಾಗಿ, ಅನುಭಾವಿಗಳಾಗಿ ಶಿಖರಕ್ಕೆ ಏರಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಬಸವಾದಿ ಶಿವಶರಣರು ಎಂದು ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಗದಗ: ಶರಣೆ ದಾನಮ್ಮದೇವಿಯದು ಉಪಮಾತೀತ ಬದುಕು. ಅದ್ಭುತ ಸಿದ್ಧಿಯನ್ನು ಪಡೆದಿದ್ದ ಅವರ ಬದುಕು ಇಂದಿನ ಆಧುನಿಕ ಮಹಿಳೆಯರಿಗೆ ಮಾದರಿಯಾಗಿದೆ ಎಂದು ತೋಂಟದಾರ್ಯ ಮಠದ ಜ. ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಇಲ್ಲಿಯ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವೀರಭದ್ರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ದಾನೇಶ್ವರಿ ಮಹಿಳಾ ಮಂಡಳ, ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜರುಗಿದ ಪುಟ್ಟರಾಜ ಕವಿ ಗವಾಯಿಗಳವರು ವಿರಚಿತ ದಾನಮ್ಮದೇವಿ ಪುರಾಣ ಪ್ರವಚನದ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಹಿಳೆಯರಿಗೂ ಕೂಡ ಧಾರ್ಮಿಕ ಸಂಸ್ಕಾರ ಕೊಡಬಹುದು, ಅವರೂ ಆಧ್ಯಾತ್ಮಿಕವಾಗಿ, ಅನುಭಾವಿಗಳಾಗಿ ಶಿಖರಕ್ಕೆ ಏರಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಬಸವಾದಿ ಶಿವಶರಣರು. ಮಹಿಳೆಯರಿಗೆ ದೊರೆತ ಧಾರ್ಮಿಕ ಸ್ವಾತಂತ್ರ್ಯದ ಫಲವಾಗಿ ನಾಡಿನಲ್ಲಿ ಹಲವಾರು ಶರಣೆಯರು ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಈ ಮಾಲಿಕೆಯಲ್ಲಿ ಗುಡ್ಡಾಪುರ ದಾನಮ್ಮತಾಯಿಗೆ ಅಗ್ರಸ್ಥಾನವಿದೆ ಎಂದು ಹೇಳಿದರು.ದೇವಸ್ಥಾನದ ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ತಡಸದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಘವೇಂದ್ರಾಚಾರ್ಯ ಶಿಲ್ಪಿ, ಮಹಾರುದ್ರಪ್ಪ ಬೆಂಗಳೂರು, ಪುರಾಣಿಕ ಫಕೀರೇಶ್ವರ ಶಾಸ್ತ್ರಿಗಳು ಹಿರೇಮಠ, ಸಂಗೀತ ಕಲಾವಿದ ವೀರೇಶ ಕಿತ್ತೂರ, ಶಾಮರಾವ ಪುಲಾರೆ, ಟ್ರಸ್ಟಿಗಳಾದ ಶಿವಬಸಪ್ಪ ಯಂಡಿಗೇರಿ, ಪ್ರದೀಪ ಕೊಡೇಕಲ್, ಜಗದೀಶ ಎಚ್ಚಲಗಾರ, ಶಿವಕುಮಾರ ಬೇವಿನಮರದ, ಶಂಭು ಕಾರದಕಟ್ಟಿ, ಸುರೇಶ ಶಿರಿಗಣ್ಣವರ, ಅರುಣಕುಮಾರ ಮುನವಳ್ಳಿ, ಪುರಾಣ ಸಮಿತಿಯ ಪದಾಧಿಕಾರಿಗಳನ್ನು, ದಾನಿಗಳನ್ನು, ಸನ್ಮಾನಿಸಲಾಯಿತು. ಜ್ಯೋತಿ ಹೇರಲಗಿ, ಶೈಲಜಾ ಕೊಡೇಕಲ್ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ಪಿಳ್ಳಿ ವಂದಿಸಿದರು.