ಸಾರಾಂಶ
ಕೊಟ್ಟೂರು: 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ತಾವು ರಚಿಸಿದ ವಚನಗಳಂತೆ ಶರಣರು ನಡೆಯುತ್ತಿದ್ದರು ಎಂದು ಗಂಗಾವತಿಯ ಟಿಎಂಎಇ ಸಂಸ್ಥೆ ಪ್ರಾಚಾರ್ಯ ಡಾ. ಕೆ.ಸಿ. ಕುಲಕರ್ಣಿ ಹೇಳಿದರು.
ಪಟ್ಟಣದ ಸರಕಾರಿ ನಿವೃತ್ತ ನೌಕರರ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಲಿಂ. ಶರಣಯ್ಯ ಹಿರೇಮಠ ದತ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಗುರುವಾರ ವಿಶೇಷ ಉಪನ್ಯಾಸ ನೀಡಿದರು.ಶರಣರ ವಚನಗಳನ್ನು ನಮ್ಮ ಹಿಂದಿನವರು ಜೀವನದಲ್ಲಿ ಅಳವಡಿಸಿಕೊಂಡು ನಡೆದಿದ್ದರು. ಈ ಕಾರಣಕ್ಕಾಗಿ ಅವರು ಸಮಾಜದಲ್ಲಿ ಗೌರವ ಗಳಿಸಿ ಮಾದರಿಯಾಗಿದ್ದರು. ಆದರೆ, ಇಂದಿನ ದಿನಗಳಲ್ಲಿ ಎಲ್ಲರೂ ಶರಣರ ವಚನಗಳ ಸಾರ ಹೇಳುತ್ತಿದ್ದಾರೆಯೇ ಹೊರತು ಆಡಳಿತದಲ್ಲಾಗಲಿ, ಸಮಾಜದಲ್ಲಾಗಲಿ, ವೈಯಕ್ತಿಕವಾಗಿ ಯಾರೂ ಅಳವಡಿಸಿಕೊಳ್ಳುತ್ತಿಲ್ಲ. ವಚನಗಳ ಸಾರ ಅತ್ಯಂತ ಮಹತ್ವದ್ದಾಗಿದೆ. ಅವುಗಳನ್ನು ಇಂದಿನ ಪೀಳಿಗೆಗೆ ತಿಳಿಸಿ ಅರ್ಥ ಮಾಡಿಸುವ ಅವಶ್ಯಕತೆಯೂ ಇದೆ. ಶರಣ ಸಾಹಿತ್ಯ ಪರಿಷತ್ ತನ್ನ ಕಾರ್ಯಕ್ರಮಗಳಲ್ಲಿ ಇಂತಹ ಮಹಾತ್ಕಾರ್ಯ ಮಾಡಲಿ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಬಿಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕೆ.ಎಂ. ಚಿದಾನಂದಯ್ಯ ಮಾತನಾಡಿ, ವಚನಗಳನ್ನು ಓದಿಕೊಂಡಿದ್ದ ಲಿಂ. ಎಚ್.ಎಂ. ಶರಣಯ್ಯನವರು, ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದರಂತೆ ನಡೆದಿದ್ದರು. ಅವರ ಆದರ್ಶಗಳಿಂದಾಗಿ ಸಮಾಜದಲ್ಲಿ ಅವರು ಮಹಾನ್ ಪುರುಷರಾಗಿದ್ದರು ಎಂದರು.
ಶ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಕೆ. ರವೀಂದ್ರನಾಥ್ ಮಾತನಾಡಿ, ಲಿಂ. ಶರಣಯ್ಯ ಹಿರೇಮಠ ಅವರು ಆದರ್ಶ ಶಿಕ್ಷಕರಾಗಿ, ಪ್ರಾಶುಂಪಾಲರಾಗಿ ನಿವೃತ್ತಿಯಾದ ನಂತರವೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಶರಣರ ಹಾದಿಯಲ್ಲಿ ಸಾರ್ಥಕ ಮಾಡಿಕೊಂಡಿದ್ದರು ಎಂದರು.ಶ.ಸಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಮಾತನಾಡಿ, ಶರಣ ಪರಿಷತ್ ಸ್ಥಾಪನೆಯಾದಾಗಿನಿಂದ ಇಲ್ಲಿ ವರೆಗೂ ದತ್ತಿ ಕಾರ್ಯಕ್ರಮಗಳ ಮೂಲಕ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕು ಅಧ್ಯಕ್ಷ ದೇವರಮನಿ ಕರಿಯಪ್ಪ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ. ಸುಜಾತಾ, ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ, ಶಿಕ್ಷಕಿ ಕೆ.ಎಸ್. ಸುಮಾ ಮಾತನಾಡಿದರು.ಪರಿಷತ್ ಸದಸ್ಯ ಟಿ.ಕೆ. ಸಿದ್ದರಾಮೇಶ್ವರ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ಡಿ.ಮಂಗಳ, ಶಸಾಪ ಖಚಾಂಚಿ ಅಂಗಡಿ ಚಂದ್ರಣ್ಣ, ದತ್ತಿ ದಾನಿಗಳಾದ ಎಂ. ಸುಜಾತಾ, ಎಂ. ಅಜ್ಜಯ್ಯಸ್ವಾಮಿ, ಎಚ್.ಎಂ. ಅನುಷಾ, ಶಾಂತಕುಮಾರಸ್ವಾಮಿ, ತಿಪ್ಪೇಸ್ವಾಮಿ ಇದ್ದರು.
ಎಚ್.ಎಂ. ಪರಿಷತ್ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ, ಅನೂಪ್ ನಿರ್ವಹಿಸಿದರು.