ಸಾರಾಂಶ
ಕುರಿ ದಡ್ಡಿಯಲ್ಲಿರುವ ಕುರಿ ಕಳ್ಳತನ ಮಾಡಲು ಬಂದ ಆರೋಪಿಗಳನ್ನು ಬೆನ್ನು ಹತ್ತಿ ಹಿಡಿಯಲು ಹೋದವನೇ ಕೊಲೆಗೀಡಾದ ಘಟನೆ ಕೆರೂರ ಸಮೀಪದ ಉಗಲವಾಟ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಕೆರೂರ
ಕುರಿ ದಡ್ಡಿಯಲ್ಲಿರುವ ಕುರಿ ಕಳ್ಳತನ ಮಾಡಲು ಬಂದ ಆರೋಪಿಗಳನ್ನು ಬೆನ್ನು ಹತ್ತಿ ಹಿಡಿಯಲು ಹೋದವನೇ ಕೊಲೆಗೀಡಾದ ಘಟನೆ ಕೆರೂರ ಸಮೀಪದ ಉಗಲವಾಟ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.ಶರಣಪ್ಪ ಬಸಪ್ಪ ಜಮ್ಮನಕಟ್ಟಿ ಕೊಲೆಯಾದ ದುರ್ದೈವಿ. ಯಾಕೂಬ್ ಅಮೀನಸಾಬ್ ಅಗಸಿಮನಿ, ಸಲ್ಮಾನ್ ಮನ್ಸೂರಸಾಬ್ ಕರೆಮನ್ನೂರ, ಸಚಿನ್ ಫಕೀರಪ್ಪ ಭಜಂತ್ರಿ ಕೊಲೆ ಆರೋಪಿಗಳು.
ವೆಂಕಟೇಶ ದಾಟನಾಳ ಎಂಬುವರ ಹೊಲದಲ್ಲಿರುವ ಕುರಿ ದಡ್ಡಿಯಲ್ಲಿ ರಾತ್ರಿ ಹೊತ್ತು ಕುರಿ ಕಳ್ಳತನ ಮಾಡಲು ಬಂದಾಗ ಮೃತ ಶರಣಪ್ಪ ಎಚ್ಚರಾಗಿ ಹಿಡಿಯಲು ಬೆನ್ನು ಹತ್ತಿದಾಗ ಆರೋಪಿತರು ಶರಣಪ್ಪನ ಮೇಲೆ ಮುಗಿಬಿದ್ದು ತಲೆಗೆ ಕಲ್ಲಿನಿಂದ ಜಜ್ಜಿ ಕುತ್ತಿಗೆ ಮೇಲೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಮೃತನ ತಂದೆ ಬಸಪ್ಪ ಹನುಮಪ್ಪ ಜಮ್ಮನಕಟ್ಟಿ ಕೆರೂರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಎಸ್ಪಿ ಅಮರನಾಥ ರೆಡ್ಡಿ ಮತ್ತು ಹೆಚ್ಚುವರಿ ಎಸ್ಪಿಗಳಾದ ಪ್ರಸನ್ನಕುಮಾರ ದೇಸಾಯಿ, ಮಹಾಂತೇಶ್ವರ ಜಿದ್ದಿ, ಡಿಎಸ್ಪಿ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.