ಮಂಗಳೂರು- ವಿಲ್ಲುಪುರಂ ಹೆದ್ದಾರಿ ವಿದ್ಯುತ್‌ ಕಂಬಗಳ ಸ್ಥಳಾಂತರ

| Published : May 01 2024, 01:15 AM IST

ಮಂಗಳೂರು- ವಿಲ್ಲುಪುರಂ ಹೆದ್ದಾರಿ ವಿದ್ಯುತ್‌ ಕಂಬಗಳ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ- ಬೆಳ್ತಂಗಡಿ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಅವರ ನಿರ್ದೇಶನದಂತೆ ಸೋಮಂತಡ್ಕ ಶಾಖೆಯ ಜೆಇ ಕೃಷ್ಣೇಗೌಡ ಮತ್ತು ತಂಡದವರ ನೇತೃತ್ವದಲ್ಲಿ ಮಂಗಳೂರು- ವಿಲ್ಲುಪುರಂ ಹೆದ್ದಾರಿಯಲ್ಲಿನ ಉಜಿರೆ ಸುತ್ತಮುತ್ತ ಕೆಲಸ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಷ್ಟ್ರೀಯ ಹೆದ್ದಾರಿಯಲ್ಲಿನ ಸುಗಮ ಸಂಚಾರಕ್ಕಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಪ್ರಕ್ರಿಯೆಯನ್ನು ಉಜಿರೆ ಮೆಸ್ಕಾಂ ಉಪವಿಭಾಗ ನಡೆಸುತ್ತಿದೆ.

ಉಜಿರೆ- ಬೆಳ್ತಂಗಡಿ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಅವರ ನಿರ್ದೇಶನದಂತೆ ಸೋಮಂತಡ್ಕ ಶಾಖೆಯ ಜೆಇ ಕೃಷ್ಣೇಗೌಡ ಮತ್ತು ತಂಡದವರ ನೇತೃತ್ವದಲ್ಲಿ ಮಂಗಳೂರು- ವಿಲ್ಲುಪುರಂ ಹೆದ್ದಾರಿಯಲ್ಲಿನ ಉಜಿರೆ ಸುತ್ತಮುತ್ತ ಕೆಲಸ ನಡೆಯುತ್ತಿದೆ.

ಕಾಮಗಾರಿ ನಡೆಯುವ ಸ್ಥಳಗಳಲ್ಲಿರುವ ವಿದ್ಯುತ್ ಕಂಬಗಳನ್ನು ಹಂತ ಹಂತವಾಗಿ ಸ್ಥಳಾಂತರಗೊಳಿಸಲಾಗುತ್ತಿದೆ. ಗ್ರಾಹಕರಿಗೆ ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ವಾರದ ಕೆಲವು ದಿನಗಳಲ್ಲಿ ನಿಗದಿತ ಗಂಟೆಗಳಲ್ಲಿ ಮಾತ್ರ ವಿದ್ಯುತ್ ಸ್ಥಗಿತಗೊಳಿಸಿ ಅಗತ್ಯ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದೆ.

ಈ ಕಾಮಗಾರಿಗೆ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಸಹಕಾರ ನೀಡುತ್ತಿದ್ದು,ಮೆಸ್ಕಾಂ ಜತೆ ಹೆದ್ದಾರಿ ಕಾಮಗಾರಿಯ ಕಾರ್ಮಿಕರು ಕೈಜೋಡಿಸುತ್ತಿದ್ದಾರೆ.ಇದರಿಂದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಕಾಮಗಾರಿ ವೇಳೆ ವಾಹನ ಸಂಚಾರಕ್ಕೂ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕಿದೆ .ಪ್ರಸ್ತುತ ಸಂಚಾರಕ್ಕೆ ಅಡ್ಡಿಯಾಗಿರುವ ಕಂಬಗಳ ಸ್ಥಳಾಂತರ ಮಾಡಿ ಬಳಿಕ ಇತರೆಡೆಯ ಕಂಬಗಳ ಸ್ಥಳಾಂತರ ನಡೆಯಲಿದೆ. 11 ಕೋಟಿ ರುಪಾಯಿ ವೆಚ್ಚ:

ಬೆಳ್ತಂಗಡಿ ಹಾಗೂ ಉಜಿರೆ ಉಪ ವಿಭಾಗದಲ್ಲಿ ಮದ್ದಡ್ಕದಿಂದ ಚಾರ್ಮಾಡಿ ತನಕ ರಸ್ತೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಲೈನ್‌ನ ಸ್ಥಳಾಂತರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೆಸ್ಕಾಂಗೆ 11 ಕೋಟಿ ರು. ಪಾವತಿಸಿದೆ. ಬೆಳ್ತಂಗಡಿ ವ್ಯಾಪ್ತಿಯಲ್ಲಿ 555 ವಿದ್ಯುತ್ ಕಂಬ, 20 ಪರಿವರ್ತಕ ಹಾಗೂ 33 ಕೆವಿಯ ಎರಡು ವಿದ್ಯುತ್ ಟವರ್ ಸ್ಥಳಾಂತರಕ್ಕೆ 2.24 ರು. ವೆಚ್ಚವಿದೆ. ಈಗಾಗಲೇ ಇಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಅಂತಿಮ ಹಂತದಲ್ಲಿದೆ. ಟವರ್‌ ಗಳ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ.

ಉಜಿರೆ ಉಪ ವಿಭಾಗದಲ್ಲಿ 1,029 ವಿದ್ಯುತ್ ಕಂಬ 108 ಪರಿವರ್ತಕ 33 ಕೆವಿಯ 34 ವಿದ್ಯುತ್ ಟವರ್ ಗಳು ಸೇರಿ 8.75 ಕೋಟಿ ರು.ವೆಚ್ಚದಲ್ಲಿ ಸ್ಥಳಾಂತರಗೊಳ್ಳಬೇಕಿವೆ. ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ಆರಂಭಗೊಂಡಿದ್ದು ಹೆದ್ದಾರಿ ಅಭಿವೃದ್ಧಿಗಾಗಿ ಒಟ್ಟು 1,584 ವಿದ್ಯುತ್ ಕಂಬ 128 ಪರಿವರ್ತಕ ಹಾಗೂ 36 ಟವರ್ ಗಳು ಸ್ಥಳಾಂತರಗೊಳ್ಳಲಿವೆ. ಮರ ತೆರವು:

ಹೆದ್ದಾರಿ ಅಭಿವೃದ್ಧಿಗೆ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಬಗೆ ಇರುವ ಮರಗಳು ತೆರವುಗೊಳ್ಳಬೇಕಿದ್ದು ಮಡಂತ್ಯಾರು, ಬೆಳ್ತಂಗಡಿ ಉಪ ಅರಣ್ಯ ವಲಯಗಳಲ್ಲಿ ಮರಗಳ ತೆರವು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಉಜಿರೆ, ಚಿಬಿದ್ರೆ, ಚಾರ್ಮಾಡಿ ಉಪ ವಲಯಗಳಲ್ಲಿ ಮರಗಳ ತೆರೆವು ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಇಲ್ಲಿ ಮರಗಳು ತೆರವುಗೊಳ್ಳದಿರುವುದು ವಿದ್ಯುತ್ ಕಂಬಗಳ ಸ್ಥಳಾಂತರ ಸಮಸ್ಯೆ ನೀಡುತ್ತಿದೆ. ಹೆದ್ದಾರಿ ಅಭಿವೃದ್ಧಿಗಾಗಿ ಒಟ್ಟು 3,000ಕ್ಕಿಂತ ಅಧಿಕ ಮರಗಳು ತೆರವುಗೊಳ್ಳಲಿದ್ದು, ಕೆಲವೆಡೆ ಮತ್ತೊಮ್ಮೆ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಸಬೇಕಾದ ಅನಿವಾರ್ಯತೆ ಇದೆ. ಗ್ರಾಹಕರಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಯುತ್ತಿದೆ ಇದೀಗ ಮೊದಲ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿರುವ ಅಗತ್ಯ ಸ್ಥಳಗಳಲ್ಲಿ ವಿದ್ಯುತ್ ಕಂಬ ಸ್ಥಳಾಂತರ ನಡೆಯುತ್ತಿದ್ದು ಇದು ಹಂತ ಹಂತವಾಗಿ ಮುಂದುವರಿಯಲಿದೆ. ವಿದ್ಯುತ್ ಟವರ್ ಗಳ ಸ್ಥಳಾಂತರ ಮುಂದಿನ ದಿನಗಳಲ್ಲಿ ನಡೆಯಲಿದೆ

- ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್, ಎಇಇ, ಮೆಸ್ಕಾಂ, ಉಜಿರೆ/ ಬೆಳ್ತಂಗಡಿ ಉಪ ವಿಭಾಗ