ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರವು ಉತ್ತರ ಕರ್ನಾಟಕದ ಸಂಪರ್ಕ ನಗರವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹೆಬ್ಬಾಗಿಲಾಗಿ ಪರಿವರ್ತನೆಯಾಗಲಿದೆ. ನಗರವನ್ನು ಸುಂದರವಾಗಿ ನಿರ್ಮಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಬದ್ಧನಾಗಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದಲ್ಲಿ ಸೋಮವಾರ ಶಿರಾ ನಗರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಪಿ.ಆರ್.ಮಂಜುನಾಥ್ ಹಾಗೂ ಸದಸ್ಯರಿಗೆ ಶುಭ ಕೋರಿ ಮಾತನಾಡಿದರು. ಶಿರಾ ನಗರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ೨೦೩೦ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ೨೦೫೦ಕ್ಕೆ ೪ ಕೋಟಿ ಜನಸಂಖ್ಯೆ ಮೀರಲಿದೆ ಎಂದು ತ್ಯಾಗರಾಜನ್ ಸಮಿತಿ ಅವರು ವರದಿ ಕೊಟ್ಟಿದ್ದಾರೆ. ಪ್ರಸ್ತುತ ೧.೫೦ ಕೋಟಿ ಜನಸಂಖ್ಯೆ ಇದ್ದು, ಕರ್ನಾಟಕದ ಶೇ. ೨೫ ರಷ್ಟು ಜನಸಂಖ್ಯೆ ಇದೆ. ಬೆಂಗಳೂರು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಏಷ್ಯಾ ಖಂಡದಲ್ಲೇ ಪ್ರಮುಖವಾದ ಪ್ರದೇಶವಾಗಿದೆ. ಆದ್ದರಿಂದ ಮುಂದೊಂದು ದಿನ ಬೆಂಗಳೂರನ್ನು ಹೊರತುಪಡಿಸಿ ಶಿರಾ ನಗರವೂ ಬೆಂಗಳೂರಿನ ಹೆಬ್ಬಾಗಲಾಗಲಿದೆ ಎಂದರು.ಶಿರಾದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ಇದಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಭಾಗದ ಶಾಸಕರೆಲ್ಲರೂ ಸೇರಿ ಸರಕಾರಕ್ಕೆ ಒಂದು ಮನವಿಯನ್ನು ನೀಡಲಿದ್ದೇವೆ. ಸರಕಾರದ ಮೇಲೆ ಒತ್ತಡ ತರುತ್ತೇವೆ. ನಾವೂ ಜನಪ್ರತಿನಿಧಿಗಳೇ ನಮಗೂ ಕೇಳುವ ಹಕ್ಕಿದೆ. ಉತ್ತರ ಕರ್ನಾಟಕದ ಭಾಗವನ್ನು ಸಂಪರ್ಕಿಸಿವುದು ಶಿರಾ. ಇಲ್ಲಿ ಬೆಳೆದ ತರಕಾರಿಯೂ ಸಹ ಅಮೇರಿಕಾಕಕ್ಕೆ ಹೋಗುತ್ತದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಆದರೆ ರೈತರಿಗೂ ಅನುಕೂಲವಾಗುತ್ತದೆ. ಎಂತಹದ್ದೇ ಸಂದರ್ಭ ಬಂದರೂ ವಿರ್ಮಾನ ನಿಲ್ದಾಣ ತರುವ ಕೆಲಸ ಮಾಡುತ್ತೇನೆ. ೨೦೩೩ಕ್ಕೆ ವಿಮಾನ ನಿಲ್ದಾಣ ಆಗಬೇಕು ಎಂದರು. ಯಾವುದೇ ಸಂದರ್ಭದಲ್ಲಿ ಕಾನೂನು ಬಹಿರ ಚಟುವಟಿಕೆ ನಡೆಯಬಾರದು. ೧೭೬೦ ಎಕರೆ ಬೋಗಸ್ ಜಮೀನು ಇದೆ. ಅದನ್ನು ಪಡೆಯಲು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದೇನೆ. ಯಾರಿಗೂ ಜಮೀನು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದ ಅವರು ಕಾನೂನು ಬಾಹಿರ ಚಟುವಟಿಕೆ ನಡೆಸುವವರನ್ನು ಜೈಲಿಗೆ ಹಾಕಲು ಶಿರಾ ಭಾಗದಲ್ಲಿ ಒಂದು ಕಾರಾಗೃಹ ತೆರೆಯಲು ಯೋಜಿಸಿದ್ದೇನೆ ಎಂದರು.
ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್ ಮಾತನಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ರೀತಿಯಲ್ಲಿ ಶಿರಾದಲ್ಲಿಯೂ ಸರಕಾರಿ ಹಾಗೂ ಖಾಸಗಿ ಜಮೀನುಗಳನ್ನು ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿ ಬಡವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳುತ್ತೇವೆ. ಜನರ ಹಿತಕ್ಕಾಗಿ ಮೂಲಭೂತ ಸೌಕರ್ಯ ಒದಗಿಸಿ ನಿವೇಶನ ಹಂಚಿಕೆ ಮಾಡುತ್ತೇವೆ ಎಂದರು. ಶಿರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾದ ಸುನಿಲ್, ಲಕ್ಕನಹಳ್ಳಿ ಶ್ರೀನಿವಾಸ್, ಕಾಳಯ್ಯ, ಲಕ್ಷ್ಮೀದೇವಮ್ಮ, ನಗರಸಭೆಯಿಂದ ತೇಜು ಬಾನುಪ್ರಕಾಶ್, ಭೂವನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸಣ್ಣಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರಾ ನಗರಸಭೆಯ ಅಧ್ಯಕ್ಷ ಜೀಶಾನ್ ಮೊಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಎಸ್ಎಸ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಮಹೇಶ್, ನಗರಸಭೆ ಸದಸ್ಯರಾದ ಬಿ.ಎಂ.ರಾಧಾಕೃಷ್ಣ, ಪಿ.ಬಿ.ನರಸಿಂಹಯ್ಯ, ಹನುಮಂತಪ್ಪ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಹೇಮಂತ್ ಗೌಡ, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ಎಚ್.ಗುರುಮೂರ್ತಿ ಗೌಡ, ಮಾಜಿ ಸೂಡಾ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಾಜಿ ಜಿ.ಪಂ. ಸದಸ್ಯೆ ಶೋಭಾ ನಾಗರಾಜು, ಮಾಜಿ ತಾ.ಪಂ. ಸದಸ್ಯ ಮಂಜುಳಬಾಯಿ ಶೇಷಾನಾಯ್ಕ, ಮಾಜಿ ಎಪಿಎಂಸಿ ಅಧ್ಯಕ್ಷ ಸತ್ಯನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.