ಸಾರಾಂಶ
ಆತ್ರಾಡಿ- ಬಜ್ಪೆ ರಾಜ್ಯ ಹೆದ್ದಾರಿಯ ಪೆರ್ನಾಲ್ - ಪಿಲಾರುಕಾನದ ಪರಿಸರದಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳನ್ನು ಸ್ಥಳೀಯ ನಾಗರಿಕರೇ ಸೇರಿ ಮುಚ್ಚುವ ಮೂಲಕ ಹೆದ್ದಾರಿ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರ್ವ
ಇಲ್ಲಿನ ಆತ್ರಾಡಿ- ಬಜ್ಪೆ ರಾಜ್ಯ ಹೆದ್ದಾರಿಯ ಪೆರ್ನಾಲ್ - ಪಿಲಾರುಕಾನದ ಪರಿಸರದಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳನ್ನು ಸ್ಥಳೀಯ ನಾಗರಿಕರೇ ಸೇರಿ ಮುಚ್ಚುವ ಮೂಲಕ ಹೆದ್ದಾರಿ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.ಕೆಲವು ದಿನಗಳ ಹಿಂದೆ ಇಲ್ಲಿನ ಸಮಾನ ಮನಸ್ಕ ನಾಗರಿಕರು ಸಂಪೂರ್ಣ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿ ಗಮನ ಸೆಳೆದಿದ್ದರು. ಆದರೆ ಅಧಿಕಾರಿ ಅಥವಾ ಜನಪ್ರತಿನಿಧಿಗಳಾಗಲಿ ರಸ್ತೆ ದುರಸ್ತಿಯ ಬಗ್ಗೆ ಆಸಕ್ತಿ ವಹಿಸದಿದ್ದುದರಿಂದ ಮತ್ತೆ ನಾಗರಿಕರು ಒಂದುಗೂಡಿ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದ ವಿರುದ್ಧ ತಮ್ಮ ಪ್ರತಿಭಟನೆ ಎಂಬ ಫಲಕಗಳನ್ನು ಹಿಡಿದುಕೊಂಡು, ತಾವೇ ಸ್ವತಃ ರಸ್ತೆ ರಿಪೇರಿ ಮಾಡಿದರು.ಈ ಬಗ್ಗೆ ಮಾತನಾಡಿದ ಶಿಕ್ಷಕ ಡಾ.ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್, ಇದು ನಿತ್ಯ ಸಾವಿರಾರು ವಾಹಗಳು ಸಂಚರಿಸುವ ರಾಜ್ಯ ಹೆದ್ದಾರಿಯಾಗಿದ್ದರೂ ಇಲಾಖೆಯವರ ಮತ್ತು ಜನಪ್ರತಿನಿಧಿಗಳ ದೀರ್ಘ ಮೌನ ಅರ್ಥವಾಗುತ್ತಿಲ್ಲ. ಇಲ್ಲಿ ನಿತ್ಯವೂ ಹತ್ತಾರು ಸವಾರರು ಹೊಂಡಗಳಲ್ಲಿ ಬಿದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ನೋವುಂಡವರ ಶಾಪ ಖಂಡಿತ ಇವರಿಗೆ ತಟ್ಟುತ್ತದೆ. ಇದು ಆರಂಭ ಅಷ್ಟೇ, ಸಂಬಂಧಪಟ್ಟವರು ಇನ್ನೂ ಸಹಾ ಕಾರ್ಯಪ್ರವತ್ತರಾಗದಿದ್ದಲ್ಲಿ ಜನರು ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.ಸುಜಯ್ ಪೆರ್ನಾಲ್ ಮಾತನಾಡಿ, ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಯಾಕೆ ಬರುವುದಿಲ್ಲ? ಇವತ್ತು ನಾವೇ ಸಿಮೆಂಟ್ ತಂದು ಕೆಲವು ಗುಂಡಿಗಳನ್ನು ಮುಚ್ಚಿದ್ದೇವೆ. ನಿಮ್ಮಿಂದ ರಸ್ತೆ ದುರಸ್ತಿ ಸಾಧ್ಯವಿಲ್ಲದಿದ್ದರೇ ಬರೆದು ಕೊಡಿ, ನಾವು ಜನರಿಂದ ಚಂದಾ ಎತ್ತಿ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ಸ್ತ್ರೀ ಸಂಘಟನೆಯವರು ಸಹಾ ತಮ್ಮ ಸಹಕಾರ ನೀಡಿದರು. ಸ್ಥಳೀಯರಾದ ಒಜ್ವಾಲ್ಡ್ ಲೋಬೊ, ವಿಲ್ಫ್ ಡಿ ಕ್ಯಾಸ್ತೆಲಿನೋ, ವ್ಯಾಲೆಂಟಿಯ್ಸ್ ಡಿಸೋಜ, ಲಾರೆನ್ಸ್ ಕೊರೆಯಾ, ಸಂದೀಪ್ ಮೆಂಡೊನ್ಸಾ, ಎಲಿಯಾಸ್ ಡಿಸೋಜ, ಅಶೋಕ್ ಲೋಬೊ, ಪ್ರಕಾಶ್ ಮಥಾಯಸ್, ಸಿಂಥಿಯಾ ಮೊದಲಾದವರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.