ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಹಾ ಶಿವರಾತ್ರಿ ಉತ್ಸವ ವಿವಿಧ ಧಾರ್ಮಿಕ, ಭಜನೆ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಈ ಭಾರಿ ಪ್ರಥಮವಾಗಿ ಮಹಾ ಶಿವ ಪಂಚಾಕ್ಷರಿ ಯಜ್ಞ ಸಹಿತ ವಿವಿಧ ಪೂರ್ವಶಿಷ್ಟ ಸಂಪ್ರದಾಯದ ಕಾರ್ಯಕ್ರಮ ನಡೆಯಿತು.
ಪುತ್ತೂರು: ಮಹಾ ಶಿವರಾತ್ರಿ ಪ್ರಯುಕ್ತ ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಹಾ ಶಿವರಾತ್ರಿ ಉತ್ಸವ ವಿವಿಧ ಧಾರ್ಮಿಕ, ಭಜನೆ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಈ ಭಾರಿ ಪ್ರಥಮವಾಗಿ ಮಹಾ ಶಿವ ಪಂಚಾಕ್ಷರಿ ಯಜ್ಞ ಸಹಿತ ವಿವಿಧ ಪೂರ್ವಶಿಷ್ಟ ಸಂಪ್ರದಾಯದ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರ ಸಾರಥ್ಯದಲ್ಲಿ ೧೦ ವೈದಿಕರು ಬೆಳಗ್ಗೆ ಯಜ್ಞ ನಡೆಸಿದರು. ೧೦ ಸಾವಿರ ಆಹುತಿಗಳನ್ನು ನೀಡಿದ ಅನಂತರ ಮಧ್ಯಾಹ್ನ ಪೂರ್ಣಾಹುತಿ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.ಶಿವರಾತ್ರಿ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಭಕ್ತ ಸಾಗರ ದೇವಾಲಯದಲ್ಲಿ ಕಂಡುಬಂತು. ವಿಶೇಷವಾಗಿ ಬಿಲ್ವಾರ್ಚನೆ ಸೇವೆ, ಶಿವ ಪಂಚಾಕ್ಷರಿ ಯಜ್ಞ ಸೇವೆ ಮಾಡಿಸುವುದರೊಂದಿಗೆ ಉಪವಾಸ, ವ್ರತಾಚರಣೆಗಳನ್ನು ಭಕ್ತರು ಕೈಗೊಂಡರು.
ಬೆಳಗ್ಗೆ ೯ ಗಂಟೆಯಿಂದ ಭಜನೋತ್ಸವ ಆರಂಭಗೊಂಡಿದ್ದು, ಸೋಮವಾರ ಬೆಳಗ್ಗಿನ ತನಕ ೨೪ ಗಂಟೆಗಳ ಭಜನೆ ನಡೆಯಲಿದೆ. ರಾತ್ರಿ ಶ್ರೀ ದೇವರ ಮಹಾಪೂಜೆ ಬಳಿಕ ಉತ್ಸವ ಬಲಿ, ಹೋರಾಂಗಣದಲ್ಲಿ ಉಡುಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಉತ್ಸವ, ಸ್ಯಾಕ್ರೋಪೋನ್ ವಾದನ, ಬ್ಯಾಂಡ್, ಭಜನೆ ಸುತ್ತು ನಡೆದು ಚಂದ್ರಮಂಡಲ ರಥೋತ್ಸವ ನಡೆಯಿತು. ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ಬಳಿಕ ದೇವರಿಗೆ ಏಕಾದಶ ರುದ್ರಾಭಿಷೇಕ, ಕೆರೆಯಲ್ಲಿ ಆಯನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಹಾಗೂ ಭಕ್ತಾಧಿಗಳು ಪಾಲ್ಗೊಂಡರು.