ಉಪ್ಪಿನಂಗಡಿ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಈ ಬಾರಿ ವಿಶೇಷವಾಗಿ ಡಿ.2ರ ಸಂಜೆಯಿಂದ ಅಭಿಷೇಕಗಳಾದಿಯಾಗಿ ಶಿವಪೂಜೆ ನಡೆಯಲಿದೆ.

ಉಪ್ಪಿನಂಗಡಿ: ಪುರಾಣ ಪ್ರಸಿದ್ದ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಈ ಬಾರಿ ವಿಶೇಷವಾಗಿ ಡಿ.2ರ ಸಂಜೆಯಿಂದ ಅಭಿಷೇಕಗಳಾದಿಯಾಗಿ ಶಿವಪೂಜೆ ನಡೆಯಲಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ರಾಧಕೃಷ್ಣ ನಾಯ್ಕ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಲ್ಲಿ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟನ್ನು ಕಟ್ಟಲಾಗಿ ಹಿನ್ನೀರು ಶೇಖರಣೆಗೊಳ್ಳುತ್ತಿರುವುದರಿಂದ ಉದ್ಭವಲಿಂಗವು ಜಲಾವೃತವಾಗುತ್ತಿದೆ. ಪರಿಣಾಮ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಅಸಾಧ್ಯವಾಗಿತ್ತು. ಈ ಬಾರಿ ಮುಂಬರುವ ಮಖೆ ಜಾತ್ರೆಯ ವರೆಗೆ ಅಣೆಕಟ್ಟಿನ ಗೇಟನ್ನು ೪ ಮೀಟರ್ ಬದಲಾಗಿ ೨ ಮೀಟರ್ ಗೆ ತಗ್ಗಿಸಿ ಜಾತ್ರೋತ್ಸವ ಮುಗಿದ ಬಳಿಕ ಅಣೆಕಟ್ಟಿನ ಗೇಟನ್ನು ೪ ಮೀಟರ್ ಗೆ ಏರಿಸಿ ಎಂದು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.ಮನವಿಗೆ ಸಕಾರಾತ್ಮಕ ಸ್ಪಂದನ ದೊರೆತರೆ ಈ ಬಾರಿ ಗತಕಾಲದಂತೆ ೩ ಮಖೆ ಜಾತ್ರೆಗೂ ಉದ್ಬವಲಿಂಗಕ್ಕೆ ಪೂಜೆ ಪುನಸ್ಕಾರಗಳು ನಡೆಯಬಹುದಾಗಿದೆ. ಈ ಮಧ್ಯೆ ಊರಿನ ಕೆಲ ಭಕ್ತಾದಿಗಳು ಉದ್ಬಲಿಂಗದ ಮರಳು ತೆಗೆದು ಉದ್ಭವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇದರ ಕಾರಣಕ್ಕೆ ಉದ್ಭವಲಿಂಗಕ್ಕೆ ವಿಶೇಷ ಅಭಿಷೇಕ ಹಾಗೂ ಶಿವ ಪೂಜೆ ನಡೆಸಲು ಸಂಕಲ್ಪಿಸಿ ಕ್ಷೇತ್ರದ ತಂತ್ರಿಗಳಿಂದ ಒಪ್ಪಿಗೆ ಪಡೆಯಲಾಗಿದೆ.

ಅದರಂತೆ ಡಿ.2ರ ಸಂಜೆ 6ರಿಂದ ಶಾಸಕ ಅಶೋಕ್ ಕುಮಾರ್ ಉಪಸ್ಥಿತಿಯಲ್ಲಿ ದೇವಳದ ಪ್ರಧಾನ ಅರ್ಚಕರಾದಿಯಾಗಿ ಊರಿನ ಸಮಸ್ತ ಭಕ್ತಾದಿಗಳೊಂದಿಗೆ ಉದ್ಭವಲಿಂಗಕ್ಕೆ ವಿಶೇಷ ಶಿವ ಪೂಜೆ ನಡೆಯಲಿದೆ. ಇದೇ ವೇಳೆ ಭಕ್ತರಿಗೆ ಸ್ವಯಂ ಅಭಿಷೇಕದ ಅವಕಾಶವನ್ನೂ ಕಲ್ಪಿಸಲಾಗಿದೆ. ಬಳಿಕ ಪ್ರಸಾದ ರೂಪವಾಗಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸೋಮನಾಥ, ಡಾ. ರಮ್ಯ ರಾಜಾರಾಮ್ , ದೇವಿದಾಸ ರೈ, ವೆಂಕಪ್ಪ ಪೂಜಾರಿ ಇದ್ದರು.