ಎಲ್ಲ ಬಂಧನಗಳಿಂದ ಮುಕ್ತವಾಗಿ ತ್ರಿಕರ್ಣಶುದ್ಧಿ, ಏಕಾಗ್ರತೆಯ ಆತ್ಮಜ್ಞಾನದ ನೆಲೆಯಲ್ಲಿ ಮಾನವ ಮಹಾಂತನಾಗಲು, ಜೀವನು ಶಿವನಾಗಲು ಬೆಳಕು ತುಂಬುವ ಶಿವಯೋಗವು ಮೋಕ್ಷದ ಮೇರು ಮಾರ್ಗವಾಗಿದೆ ಎಂದು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಎಲ್ಲ ಬಂಧನಗಳಿಂದ ಮುಕ್ತವಾಗಿ ತ್ರಿಕರ್ಣಶುದ್ಧಿ, ಏಕಾಗ್ರತೆಯ ಆತ್ಮಜ್ಞಾನದ ನೆಲೆಯಲ್ಲಿ ಮಾನವ ಮಹಾಂತನಾಗಲು, ಜೀವನು ಶಿವನಾಗಲು ಬೆಳಕು ತುಂಬುವ ಶಿವಯೋಗವು ಮೋಕ್ಷದ ಮೇರು ಮಾರ್ಗವಾಗಿದೆ ಎಂದು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಉತ್ತರಪ್ರದೇಶದ ವಾರಾಣಸಿಯಲ್ಲಿರುವ ವೀರಶೈವ ಧರ್ಮದ ಜ್ಞಾನ ಪೀಠದಲ್ಲಿ ರಷ್ಯಾ ದೇಶದ ಪ್ರಸಿದ್ಧ ಹಠಯೋಗಿಣಿ ವೋಲ್ಗಾ ಅವರಿಗೆ ಶ್ರಾವಣ ಸೋಮವಾರದ ಪರ್ವಕಾಲದಲ್ಲಿ ಶಿವಯೋಗ ದೀಕ್ಷೆ ನೀಡಿ ಆಶೀರ್ವಚನ ನೀಡಿದ ಅವರು, ಶಿವಯೋಗವು ಅನನ್ಯ ಭಕ್ತಿಯ ಶಿವನಾಮಸ್ಮರಣೆಯ ನಿತ್ಯದ ಅನುಸಂಧಾನದಲ್ಲಿ ಬಾಹ್ಯ ಆಚರಣೆಯನ್ನು ಆಂತರಿಕ ಅನುಭಾವವಾಗಿ ಪರಿವರ್ತಿಸುವ ಮಹಾಸಾಧನವಾಗಿದೆ ಎಂದರು.ಪ್ರಾತಃಕಾಲದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಹಠಯೋಗಿಣಿ ವೋಲ್ಗಾ ಅವರ ತೆಲೆಯ ಮೇಲೆ ಭಸ್ಮದಿಂದ ಪಂಚಕೋನ ಬರೆದು ಶಿವಪಂಚಾಕ್ಷರಿ ಮಹಾಮಂತ್ರದ ಪ್ರಣವಗಳನ್ನು ತುಂಬಿ ಶಿವಯೋಗದೀಕ್ಷೆ ನೀಡಿ ಆಶೀರ್ವದಿಸಿದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಭಾರತೀಯ ಪರಂಪರೆಯಂತೆ ಹಠಯೋಗಿಣಿ ವೋಲ್ಗಾ ಅವರಿಗೆ ‘ಹಠಯೋಗಿಣಿ ಮಾನಸಿದೇವಿ’ ಎಂದು ಮರು ನಾಮಕರಣ ಮಾಡಿದರು.ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಹಠಯೋಗಿಣಿ ಮಾನಸಿದೇವಿ ಶ್ರೀಕಾಶಿ ಜಗದ್ಗುರು ಭಗವತ್ಪಾದರ ತಪೋಹಸ್ತದ ಶಕ್ತಿಪಾತದೊಂದಿಗೆ ಜರುಗಿದ ಈ ಶಿಯೋಗ ದೀಕ್ಷೆಯಿಂದಾಗಿ ನನ್ನ ಹಠಯೋಗ ಸಾಧನಾ ಪಥಕ್ಕೆ ವಿಶಿಷ್ಟ ಪ್ರೇರಣೆಯ ಮಹಾಬೆಳಕು ಲಭಿಸಿದೆ ಎಂದು ಭಾವುಕರಾದರು.ಮಹಾರಾಷ್ಟ್ರದ ವಸಮತನಗರದ ಶ್ರೀದಿಗಂಬರ ಶಿವಾಚಾರ್ಯಸ್ವಾಮೀಜಿ, ಕಳಮನೂರಿನ ಶ್ರೀಮಹಾದೇವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶದ ಭಕ್ತರು ಇದ್ದರು.ಜೀವಾತ್ಮನು ತನ್ನ ನಿಜಸ್ವರೂಪವನ್ನು ಅರಿತುಕೊಂಡು ಪರಮಶಿವನ ಪವಿತ್ರ ಸಾನ್ನಿಧ್ಯದೊಂದಿಗೆ ಐಕ್ಯತೆಯ ಅನುಭೂತಿಯನ್ನು ಸಂಪಾದಿಸುವ ಸರ್ವ ಶ್ರೇಷ್ಠ ಸಾಧನಾ ಪಥ. ಎಲ್ಲ ಚಂಚಲತೆ, ಮಮಕಾರ, ಬೇಕು-ಬೇಡಗಳ ದ್ವಂದ್ವಗಳ ತುಡಿತಗಳ ಅಂಗ ಭಾವ ಅಂದರೆ ದೇಹದ ವ್ಯಾಮೋಹದ ಭಾವನೆಗಳು ಕರಗಿ ಶಿವಭಾವದ ಮೇರು ಸ್ಥಿತಿಯಲ್ಲಿ ಮಹಾಬೆಳಕನರಸುವ ಉನ್ನತೋನ್ನತ ಅನುಭಾವದ ತನ್ಮಯತೆಯ ಪಯಣವೇ ಶಿವಯೋಗವಾಗಿದೆ.

-ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠ.