ಸಾರಾಂಶ
ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ದ.ಕ. ಜಿಲ್ಲಾ ವಿಭಾಗ, ಆರ್ಯ ಯಾನೆ ಮರಾಠ ಸಮಾಜ ಸಂಘದ ಆಶ್ರಯದಲ್ಲಿ ಬುಧವಾರ ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಶಿವಾಜಿ ಮಹಾರಾಜ ಬರಿಯ ವ್ಯಕ್ತಿಯಲ್ಲ. ಆತ ಮಹಾನ್ ಶಕ್ತಿ. ಹಿಂದೂ ಸಮಾಜಕ್ಕಾಗಿ ಆತ ಮಾಡಿದ ತ್ಯಾಗ ಬಲಿದಾನವನ್ನು ದಿನನಿತ್ಯ ಸ್ಮರಿಸಬೇಕಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ದ.ಕ. ಜಿಲ್ಲಾ ವಿಭಾಗ, ಆರ್ಯ ಯಾನೆ ಮರಾಠ ಸಮಾಜ ಸಂಘದ ಆಶ್ರಯದಲ್ಲಿ ಬುಧವಾರ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ದೂರದೃಷ್ಟಿಯ ರಾಜನಾಗಿದ್ದ ಕಾರಣ ಇತಿಹಾಸದಲ್ಲಿ ದೀರ್ಘಕಾಲದಿಂದ ನೆನಪಿನಲ್ಲಿ ಉಳಿದಿದ್ದಾರೆ. 400 ವರ್ಷಗಳ ಅವಧಿಯಲ್ಲೂ ಅವರ ಸಾಧನೆಗಳನ್ನು ನೆನಪಿಸುತ್ತಿರುವುದು ಅವರ ಗಾಂಭೀರ್ಯತೆಯ ವಿಶೇಷ ಸಂಕೇತ ಎಂದು ಅವರು ಹೇಳಿದರು.ಕೆಕೆಎಂಪಿ ಜಿಲ್ಲಾಧ್ಯಕ್ಷ ಎ.ವಿ. ಸುರೇಶ್ರಾವ್ ಕರ್ಮೋರೆ ಪ್ರಾಸ್ತಾವಿಕದಲ್ಲಿ, ಬೊದೇಲ್ನಲ್ಲಿ ಮರಾಠ ಸಮುದಾಯ ಭವನದಲ್ಲಿ 2 ಅಂತಸ್ತಿನ ಕಾಮಗಾರಿಗೆ 1 ಕೋಟಿ ರು. ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಅಂತಿಮ ಹಂತದಲ್ಲಿದೆ. 50 ಲಕ್ಷ ರು. ಅನುದಾನದ ನಿರೀಕ್ಷೆ ಇದ್ದು, ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆರ್ಯ ಯಾನೆ ಮರಾಠ ಜಾತಿಯನ್ನು 3ಬಿ ಯಿಂದ 2ಎಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಂಘದಿಂದ ಹೋರಾಟ ನಡೆಯುತ್ತಿದೆ. ಶಂಕರಪ್ಪ ಆಯೋಗವೂ ಶಿಫಾರಸು ಮಾಡಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಸ್ವಾಗತಿಸಿದರು. ವೇದಿಕೆಯಲ್ಲಿ ಆರ್ಯ ಯಾನೆ ಮರಾಠ ಸಮಾಜ ಸಂಘದ ಉಪಾಧ್ಯಕ್ಷ ಗಿರೀಶ್ ರಾವ್ ಬೋಸ್ಲೆ, ಕೆಕೆಎಂಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಸವಿತಾ ನಾಗೇಶ್ ಪಾಟೀಲ್, ರಾಜ್ಯ ಮಹಿಳಾ ಘಟಕದ ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಆರ್ಯ ಯಾನೆ ಮರಾಠ ಸಂಘದ ಕಾರ್ಯದರ್ಶಿ ನಿಖಿಲ್ ಜಾದವ್ ಮತ್ತಿತರರಿದ್ದರು......................
ಶಿವಾಜಿ ಮೂರ್ತಿ ಸ್ಥಾಪಿಸಿಯೇ ಸಿದ್ಧನಗರದ ಪಂಪ್ವೆಲ್ನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಯ ಕುರಿತಂತೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಚುನಾವಣೆ ಹಾಗೂ ಬಳಿಕ ನಡೆದ ಬೆಳವಣಿಗೆಯಿಂದ ಈ ಕಾರ್ಯ ಹಿಂದಕ್ಕೆ ಸರಿದಿದೆ. ಇದೀಗ ಸರ್ಕಾರ ಅನುಮತಿ ಕೊಟ್ಟರೆ ಸರಿ, ಕೊಡದಿದ್ದರೆ ನಾವೇ ಶಿವಾಜಿ ಮೂರ್ತಿ ಸ್ಥಾಪಿಸಿಯೇ ಸಿದ್ಧ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.