ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳ ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದವರು ಶಿವಾಜಿ, ಇವರ ಶೌರ್ಯ, ಸಾಹಸ ರಾಷ್ಟ್ರಭಕ್ತಿ ಆಡಳಿತ ಎಂದೆಂದಿಗೂ ಪ್ರೇರಣದಾಯಕ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಕೃಷ್ಣಾಭವಾನಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಾರಾಷ್ಟ್ರದ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಫೆ. 19 ರಂದು ಮರಾಠಾ ಕುಟುಂಬದಲ್ಲಿ ಶಿವಾಜಿ ಜನಿಸಿದರು. ಇವರ ಜನ್ಮದಿನ ಸಾಕಷ್ಟು ಜನಪ್ರಿಯವಾಗಿದೆ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಮುಖ್ಯ ಪಾತ್ರವಹಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಸಮಾಜದ ಉದ್ಧಾರಕ್ಕಾಗಿ ಹೋರಾಡಲಿಲ್ಲ, ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದರು. ಮೊಘಲರ ವಿರುದ್ಧ ಅನೇಕ ಯುದ್ಧಗಳ ಮಾಡಿ ಅವರನ್ನು ಸೋಲಿಸಿದ ಮರಾಠ ಕೀರ್ತಿ ಮರಾಠ ಚಕ್ರವರ್ತಿ ಎಂದು ಗುರುತಿಸಿಕೊಂಡವರು. ಇಂತಹ ಮಹಾನ್ ಯೋಧನ ಜಯಂತಿ ಸರ್ಕಾರವು ಆಚರಿಸುತ್ತಿದ್ದು ಇದು ನಮಗೆ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ಖಜಾಂಚಿ ಗೋಪಾಲರಾವ್ ಮಾನೆ, ಕ್ಷತ್ರಿಯ ಕಾರ್ಯದರ್ಶಿ ಯಲ್ಲಪ್ಪ ಢಮಾಳೆ, ಶಹಾಜಿ ಮಹಾರಾಜ ಭೋಸ್ಲೆ ಅಭಿವೃದ್ಧಿ ಸ್ಮಾರಕ ಸಮಿತಿಯ ಅಧ್ಯಕ್ಷ ವೈ.ಮಲ್ಲೇಶ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷರಾದ ಗೌರಬಾಯಿ ಮೋಹಿತೆ, ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರರು ಗಾಯಿತ್ರಿಬಾಯಿ ಖಂಡೋಜಿರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರವಿಚಂದ್ರ, ಇನ್ನಿತರರಿದ್ದರು.