ಅಡಕೆ ಜತೆ ಮೆಣಸು ಬೆಳೆದು ಯಶಸ್ಸು ಕಾಣುತ್ತಿರುವ ಶಿವಪ್ರಸಾದ್‌

| Published : May 25 2025, 11:54 PM IST

ಸಾರಾಂಶ

ಹೊಸದುರ್ಗ ತಾಲೂಕಿನ ರಂಗಯ್ಯನೂರು ಗ್ರಾಮದ ಶಿವಪ್ರಸಾದ್ ಅವರ ಅಡಿಕೆ ಜೊತೆ ಉಪ ಉತ್ಪನ್ನವಾಗಿ ಬೆಳೆದಿರುವ ಕಾಳುಮೆಣಸು.

ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆಗಳ ಕಡೆ ರೈತರ ಮನಸ್ಸು । ಯಾವುದೇ ವೆಚ್ಚವಿಲ್ಲದೆ ಪ್ರತಿ ವರ್ಷ 1 ಲಕ್ಷ ರು. ಆದಾಯ ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಲೆನಾಡಿಗೆ ಸೀಮಿತವಾಗಿದ್ದ ಕಾಳು ಮೆಣಸು ಈಗ ಹೊಸದುರ್ಗ ತಾಲೂಕಿಗೂ ಕಾಲಿಟ್ಟಿದ್ದು ಅಡಿಕೆ ತೆಂಗು ಬೆಳೆಯುವ ರೈತರಿಗೆ ಆದಾಯ ತರುವ ಪರ್ಯಾಯ ಬೆಳೆಯಾಗಿ ರೂಪಗೊಳ್ಳುತ್ತಿದೆ.

ತಾಲೂಕಿನ ರಂಗಯ್ಯನೂರು ಗ್ರಾಮದ ಜಿ . ಶಿವಪ್ರಸಾದ್ ಎಂಬುವರು ಅಡಿಕೆ ಜೊತೆ ಪರ್ಯಾಯವಾಗಿ ಕಾಳು ಮೆಣಸು ಬೆಳೆದು ಯಶಸ್ಸು ಪಡೆದಿದ್ದಾರೆ.

ಕಲ್ಪತರು ನಾಡೆಂದೇ ಪ್ರಸಿದ್ಧವಾದ ಈ ನೆಲದಲ್ಲಿ ತೆಂಗು ಉಳಿದಿದ್ದೇ ಹೆಚ್ಚು. ಬೆಂಕಿರೋಗದಿಂದ ಮರಗಳ ಮಾರಣ ಹೋಮ ಒಂದೆಡೆಯಾದರೆ, ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಇಂತಹ ಸಂಕಷ್ಟಗಳನ್ನೆದುರಿಸಿದ್ದ ನೆಲದಲ್ಲೀಗ ಅಡಿಕೆ ಜೊತೆಗೆ ಕಾಳು ಮೆಣಸಿನಂತಹ ವಾಣಿಜ್ಯ ಬೆಳೆಗಳು ಸದ್ದು ಮಾಡುತ್ತಿವೆ. ರೈತರು ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆಗಳ ಕಡೆ ಮನಸ್ಸು ಮಾಡುತ್ತಿದ್ದಾರೆ . ಸೂಕ್ತವಾಗಿ ನಿರ್ವಹಣೆ ಮಾಡಿದರೆ ಯಾವುದೇ ಖರ್ಚಿಲ್ಲದೇ ಪರ್ಯಾಯ ಬೆಳೆಯೂ ಸಹ ಕೈಹಿಡಿಯಬಲ್ಲದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ರೈತ ಜಿ. ಶಿವಪ್ರಸಾದ್ ಇತರರಿಗೆ ಮಾದರಿ: ಪಿಯುಸಿ ಓದಿರುವ ಜಿ ಶಿವಪ್ರಸಾದ್ ಅವರಿಗೆ ಕೃಷಿ ಬಗ್ಗೆ ವಿಶೇಷ ಒಲವಿದೆ. ಒಟ್ಟು 8 ಎಕರೆ ಜಮೀನು ಹೊಂದಿರುವ ಇವರು 5 ಎಕರೆ ಜಮೀನಿನಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ತಾಲೂಕಿನ ತಂಡಗ ಗ್ರಾಮದ ರೈತ ಕಲ್ಲೇಶ್ ಅವರ ಜಮೀನಿಗೆ ಭೇಟಿ ನೀಡಿದ್ದ ವೇಳೆ ಅವರು ಅನುಸರಿದ್ದ ಕೃಷಿ ವಿಧಾನವನ್ನು ತಾವು ಅನುಸರಿಸಿ ಕಾಳು ಮೆಣಸು ಬೆಳೆಯತ್ತಾ ಮುಖ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದಿಂದ ಕಾಳುಮೆಣಸಿನ ಒಂದು ಸಸಿಗೆ 15 ರು.ನಂತೆ ತಂದು ಅಡಿಕೆ ಗಿಡಗಳ ಪಕ್ಕದಲ್ಲಿಯೇ ನಾಟಿ ಮಾಡಲಾಗಿದೆ. ಎರಡು ವರ್ಷ ಈ ಸಸಿಗಳ ಆರೈಕೆ ನಡೆಯಿತು. ಇದೀಗ ಕಳೆದ 8 ವರ್ಷಗಳಿಂದಲೂ ರೈತರ ಕೈಹಿಡಿದಿದೆ. ಒಂದು ಕಾಲು ಎಕರೆ ಭೂಮಿಗೆ ಮೆಣಸು ನಾಟಿ ಮಾಡಿದ್ದು, ಪ್ರತಿ ವರ್ಷ 1 ರಿಂದ 2 ಕ್ವಿಂಟಾಲ್ ಕಾಳುಮೆಣಸು ಪಡೆಯಲಾಗುತ್ತಿದೆ. ಯಾವುದೇ ವೆಚ್ಚವಿಲ್ಲದೆ ಪ್ರತಿ ವರ್ಷ 1 ಲಕ್ಷ ರು.ವರೆಗೂ ಆದಾಯ ಗಳಿಸುತ್ತಿದ್ದಾರೆ.

ಸಸಿ ನೆಟ್ಟು ಆರು ಅಡಿ ಬೆಳೆಯುವವರೆಗೂ ಸ್ವಲ್ಪ ಜೋಪಾನ ಮಾಡಬೇಕು. ಆದಾದ ನಂತರ ಬಳ್ಳಿ ಅಡಿಕೆ ಮರಗಳಿಗೆ ತಾನೆ ಅಂಟಿಕೊಳ್ಳಲಾರಂಭಿಸುತ್ತದೆ. ಐದು ಟಿಸಿಲುಗಳಿಂದ 25 ಟಿಸಿಲುಗಳಾಗಿ ಅಡಿಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಅಂಟಿಕೊಳ್ಳುತ್ತದೆ. ಕಾಳು ಮೆಣಸು ಹಾಕಿದಾಗಿಂದ ಇಲ್ಲಿಯವರೆಗೂ ಯಾವುದೇ ರೋಗ ರುಜಿನೆಗಳು ಬಾಧಿಸಿಲ್ಲ. ಯಾವುದೇ ವೆಚ್ಚವೂ ಸಹ ಆಗಿಲ್ಲ. ಅಡಿಕೆ ಗಿಡಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ಕುರಿ ಗೊಬ್ಬರ ಹಾಕಲಾಗುತ್ತದೆ. ನಿತ್ಯ ಡ್ರಿಪ್ ಮಾಡಿ ನೀರಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಡಿಕೆಗಿಡಗಳ ಜೊತೆಗೆ ಕಾಳುಮೆಣಸು ಗಿಡದ ಆರೈಕೆಯೂ ಆಗಿರುತ್ತದೆ ಎನ್ನುತ್ತಾರೆ ರಂಗೈನೂರು ರೈತ ಜಿ. ಶಿವಪ್ರಸಾದ್.