ಡಾ. ಶಿವರಾಮ ಕಾರಂತರು ದೇಶ ಕಂಡ ಮಹೋನ್ನತ ಸಾಧಕ: ಜುಬಿನ್ ಮೊಹಾಪಾತ್ರ

| Published : Oct 11 2024, 11:49 PM IST

ಡಾ. ಶಿವರಾಮ ಕಾರಂತರು ದೇಶ ಕಂಡ ಮಹೋನ್ನತ ಸಾಧಕ: ಜುಬಿನ್ ಮೊಹಾಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ನವೆಂಬರ್ ತಿಂಗಳಲ್ಲಿ ಡಾ. ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿ ಪ್ರದಾನ ಸೇರಿದಂತೆ ಈಗಾಗಲೇ ಹಾಕಿಕೊಂಡಿರುವ ಯೋಜನೆಯಂತೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕನ್ನಡ ಸಾಹಿತ್ಯ ಪರಂಪರೆಗೆ ಡಾ. ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದ್ದು, ದೇಶವೇ ಗುರುತಿಸಿರುವಂತಹ ಮಹೋನ್ನತ ಸಾಧಕರಾದ ಡಾ. ಕಾರಂತರ ಮೌಲ್ಯಗಳು ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಸದಾ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರು ಪರ್ಲಡ್ಕದ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ವತಿಯಿಂದ ಗುರುವಾರ ಆಯೋಜಿಸಲಾದ ಡಾ. ಶಿವರಾಮ ಕಾರಂತರ ೧೨೩ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಬಿ. ಅರ್ತಿಕಜೆ ಮಾತನಾಡಿ, ಡಾ. ಕಾರಂತರು ಸಾಹಿತ್ಯ ಕೃಷಿ ಮಾಡಿದ ಕರ್ಮಭೂಮಿ ಬಾಲವನ ನಮಗೆಲ್ಲರಿಗೂ ಪುಣ್ಯಭೂಮಿ. ನೇರ ನಡೆ- ನುಡಿಯ ಕ್ರಿಯಾಶಕ್ತಿ ಹೊಂದಿದ್ದ ಡಾ. ಶಿವರಾಮ ಕಾರಂತರು ಯಾವುದೇ ವಿಷಯದಲ್ಲಿ ‘ಆಸಕ್ತಿ’ ಮಾತ್ರ ಸಾಲದು ‘ಆ ಶಕ್ತಿ’ ಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಕಠಿಣವಾಗಿ ಮಾತನಾಡಬಲ್ಲ ಓರ್ವ ಖಾರದ ವ್ಯಕ್ತಿತ್ವ ಕಾರಂತರದ್ದು ಎಂದು ನೆನಪಿಸಿಕೊಂಡರು.

ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಲೋಕೋಪಯೋಗಿ ಇಲಾಖೆಗೆ ಕಾರ್ಯಪಾಲಕ ಎಂಜಿನಿಯರ್ ರಾಜಾರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು.

ಬಾಲವನ ಕಾರ್ಯಕ್ರಮ ಸಂಯೋಜಕ, ಶಿಕ್ಷಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹರ್ಷಿತಾ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು.ನವಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಾ. ಶಿವರಾಮ ಕಾರಂತರ ಜನ್ಮ ದಿನವನ್ನು ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಡಾ. ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿ ಪ್ರದಾನ ಸೇರಿದಂತೆ ಈಗಾಗಲೇ ಹಾಕಿಕೊಂಡಿರುವ ಯೋಜನೆಯಂತೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದರು.