ಉಡುಪಿ: ಪರ್ಯಾಯ ಶೀರೂರು ಮಠದ ವತಿಯಿಂದ 15ರಂದು ಶ್ರೀಕೃಷ್ಣ ಮಠದಲ್ಲಿ ಶಿವರಾತ್ರಿ ಆಚರಣೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಪರ್ಯಾಯ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದರು. ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಗಳು, ೧5ರ ಸಂಜೆ 6 ಗಂಟೆಯಿಂದ 16ರ ಬೆಳಗ್ಗೆ 7 ಗಂಟೆಯ ತನಕ ಅಖಂಡ ಶಿವರಾತ್ರಿ ಉತ್ಸವ ನಡೆಯಲಿದೆ. ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮಗಳು ನಡೆಯಲಿದೆ. ವಿಷ್ಣುಸಹಸ್ರನಾಮ, ಪಾರಾಯಾಣ ಹಾಗೂ ಶಿವಪಂಚಾಕ್ಷರಿ ಮಂತ್ರ ಜಪ ಸ್ಮರಣೆ ನಡೆಯಲಿದೆ ಎಂದರು. 15ರಂದು ಸಂಜೆ 5.45 ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಕೃಷ್ಣ ಭಕ್ತರು, ಶಿವನ ಭಕ್ತರು ಸಮಾಗಮ ಆಗಬೇಕೆನ್ನುವ ಉದ್ದೇಶ ಇಟ್ಟುಕೊಂಡಿದ್ದೇವೆ. ಸಂಜೆ 6 ಗಂಟೆಯಿಂದ 6.30 ರವರೆಗೆ ಆಶೀರ್ವಚನ, 6.30 ರಿಂದ 7 ಗಂಟೆವರೆಗೆ ಪ್ರವಚನ, ರಾತ್ರಿ 7 ರಿಂದ ರಾತ್ರಿ 9.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ರಾತ್ರಿ 9.30 ರಿಂದ 10 ಗಂಟೆವರೆಗೆ ಪೂಜೆ, 10 ರಿಂದ 11 ಗಂಟೆವರೆಗೆ ಪ್ರವಚನ, ರಾತ್ರಿ 11 ರಿಂದ ಮಧ್ಯರಾತ್ರಿ 12.30 ರವರೆಗೆ ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ, 12.30 ರಿಂದ 2.30 ರವರೆಗೆ ಕುಳಿತು ಭಜನೆ, ರಾತ್ರಿ 2.30 ರಿಂದ ರಿಂದ 4 ಗಂಟೆವರೆಗೆ ಕುಣಿತ ಭಜನೆ, ಮುಂಜಾನೆ 4 ರಿಂದ ಗಂಟೆಯಿಂದ 5.30 ರವರೆಗೆ ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.