ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಸಮಿಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಯಿತು.ದೇವಾಲಯ ಸಮಿತಿ, ಕಾಫಿ ಬೆಳೆಗಾರರು ಮತ್ತು ದಾನಿಗಳು ಸೇರಿಕೊಂಡು 1999ರಿಂದ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಶುಕ್ರವಾರ ಮುಂಜಾನೆಯಿಂದ ಸಂಜೆ ವರೆಗೂ ಸ್ಥಳೀಯ ಭಕ್ತಾದಿಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯಿಂದ ಆಗಮಿಸುತ್ತಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತುತ್ತಿದ್ದರು.
ಹಾಸನ ಜಿಲ್ಲೆಯಿಂದ ಬರುತ್ತಿದ್ದ ಭಕ್ತರು ಶನಿವಾರಸಂತೆ-ಬೇಟೆಕಟ್ಟೆ ಮಾರ್ಗವಾಗಿ, ಮೈಸೂರು-ಕುಶಾಲನಗರ ಕಡೆಯಿಂದ ಆಗಮಿಸುತ್ತಿದ್ದ ಭಕ್ತರು ಬಾಣವಾರ-ಶನಿವಾರಸಂತೆ ಮಾರ್ಗವಾಗಿ ಮಾಲಂಬಿ ಗ್ರಾಮದ ಮೂಲಕ ಬೆಟ್ಟ ಹತ್ತಿದರು. ಶಿವರಾತ್ರಿ ಹಬ್ಬದ ಪ್ರಯುಕ್ತ ಮಳೆ ಮಲ್ಲೇಶ್ವರ ಸ್ವಾಮಿಗೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಅರ್ಚಕ ಲಿಂಗರಾಜು ನೇತೃತ್ವದಲ್ಲಿ ಬಾಲು, ದಿವ್ಯಶ್ ಅರ್ಚಕರ ತಂಡ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಿತು. ಬೆಟ್ಟದ ತದಿಯಲ್ಲಿ ಭಕ್ತಾದಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.ಸಾವಿರಾರು ಸಂಖ್ಯೆಯಲ್ಲಿ ವಯಸ್ಕರು, ಕಿರಿಯರು, ಮಕ್ಕಳು ಉತ್ಸಾಹದಿಂದ ಬೆಟ್ಟವನ್ನೇರಿ ಸಂಭ್ರಮ ಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಪುಟ್ಟ ಜಾತ್ರೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ದಾರಿ ಮಧ್ಯದಲ್ಲಿ ಭಕ್ತರಿಗೆ ಕುಡಿಯಲು ಮಜ್ಜಿಗೆ ನೀರು ವಿತರಣೆ ಮಾಡಲಾಯಿತು. 7-8 ಸಾವಿರ ಭಕ್ತಾದಿಗಳು ಬೆಟ್ಟದ ಮೇಲೆ ನಡೆದ ಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹೆಗ್ಗು-ದೀಣೆಕೊಪ್ಪದ ಯುವಕರ ತಂಡ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಿಸಿತು.ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಎಚ್.ಪಿ.ಶೇಷಾದ್ರಿ, ಬಿ.ಕೆ.ಸುಬ್ರಮಣ್ಯ, ಎಚ್.ವಿ.ದಿವಾಕರ್, ಎಚ್.ವಿ.ಸುರೇಶ್, ಎಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಎಚ್.ಎಸ್.ವಸಂತ್, ಎಚ್.ಎಸ್.ಯಶ್ವಂತ್, ಎಂ.ಇ.ವೆಂಕಟೇಶ್, ಗೌಡಳ್ಳಿ ಗಣೇಶ್, ಎಚ್.ಎಸ್.ಪಾಲಾಕ್ಷ ಮುಂತಾದವರು ಹಾಜರಿದ್ದರು.