ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ಜಲಕ್ರೀಡಾ ಕೇಂದ್ರಗಳನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾಡಳಿತ, ಪಂಚಾಯತ್, ಯುವ ಸಬಲೀಕರಣ‌ ಮತ್ತು ಕ್ರೀಡಾ ಇಲಾಖೆ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಗಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತುಮಕೂರಿನ ಯುವ ಸಮುದಾಯ ಹಾಗೂ ಕ್ರೀಡಾಸಕ್ತರಿಗೆ ಉತ್ತಮ ಸೌಲಭ್ಯಗಳಿರುವ ಕ್ರೀಡಾಂಗಣಗಳ ಅವಶ್ಯ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯಗಳಿರುವ ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣ, ಟೆನ್ನಿಸ್ ಅಂಕಣಗಳನ್ನು ನುರಿತ ಕ್ರೀಡಾ ತಜ್ಞರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿ ಇಷ್ಟು ವಿಶಾಲವಾದ ಸುಂದರ ಕೆರೆ ಎಲ್ಲ ಜಿಲ್ಲೆಗಳಲ್ಲಿ ಇಲ್ಲ. ಇರುವ ಅವಕಾಶಗಳನ್ನು ಇಲ್ಲಿ ಬಳಸಿಕೊಂಡ ಜಲಕ್ರೀಡೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದರು.

ತುಮಕೂರು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಹಬ್ ಆಗಿದೆ. ಈಗಾಗಲೇ ಜಿಲ್ಲಾ ಕ್ರೀಡಾ ಹಾಸ್ಟೆಲ್ ಇದ್ದು ಮತ್ತೊಂದು ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ ಚಿಂತನೆ ಇದೆ ಎಂದರು. ತುಮಕೂರು ಜಿಲ್ಲಾದ್ಯಂತ ವಿವಿಧ ತಾಲೂಕುಗಳಲ್ಲಿ ನಡೆಯುತ್ತಿರುವ ಜನಸಂಪರ್ಕ ಸಭೆ ಯಶಸ್ವಿಯಾಗುತ್ತಿದೆ. ಗುಬ್ಬಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ನಡೆದ ಜನಸಂರ್ಕನ ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇದನ್ನು ಆಧಾರ್ ಅದಾಲತ್ ರೀತಿಯಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲು ಚಿಂತನೆ ಇದೆ. ಪೌತಿ ಖಾತೆ ಆಂದೋಲನ ಕೂಡ ಹಮ್ಮಿಕೊಳ್ಳಲಾಗುವುದು. ಈ ವಾರದಲ್ಲಿ 10 ಸಾವಿರ ಆನ್ ಲೈನ್ ನಲ್ಲಿ ಪೌತಿ ಖಾತೆ ಮಾಡಿದ್ದೇವೆ. ಜನಸಂಪರ್ಕ ಸಭೆಯಲ್ಲಿ ಸ್ಥಳದಲ್ಲೇ ಕೆಲವು ಪರಿಹಾರಗಳು ಆಗಿವೆ ಎಂದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಎಂಟಿಸಿ ನಿಗಮದ ಉಪಾಧ್ಯಕ್ಷ ನಿಕೇತ್ ರಾಜ್ ಮರ್ಯ , ಜಿ.ಪಂ ಮುಖ್ಯ ಕಾರ್ಯದನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎ.ಅಶೋಕ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶೋ ಸಿ., ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.