ಓದಿನ ಕಡೆ ಆಸಕ್ತಿ ತೋರಿ ದುಶ್ಚಟಗಳಿಂದ ದೂರವಿರಿ: ಬಾಲಕೃಷ್ಣ ಭಟ್‌ ಕರೆ

| Published : Dec 29 2024, 01:19 AM IST

ಓದಿನ ಕಡೆ ಆಸಕ್ತಿ ತೋರಿ ದುಶ್ಚಟಗಳಿಂದ ದೂರವಿರಿ: ಬಾಲಕೃಷ್ಣ ಭಟ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕಾದರೆ ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣಭಟ್ ಕರೆ ನೀಡಿದರು.

ಶೆಟ್ಟಿಕೊಪ್ಪ ಬರ್ಕ್ ಮನ್ಸ್ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕಾದರೆ ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣಭಟ್ ಕರೆ ನೀಡಿದರು.

ಶನಿವಾರ ತಾಲೂಕಿನ ಶೆಟ್ಟಿಕೊಪ್ಪದ ಬರ್ಕ್ ಮನ್ಸ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆಲಸ್ಯ, ನಿರ್ಲಕ್ಷ ಭಾವ ಇರಬಾರದು. ಬೆಳಿಗ್ಗೆ ಬೇಗನೇ ಏಳಬೇಕು. ಬೇಗ ಏಳುವುದರಿಂದ ನಿಮ್ಮಲ್ಲಿ ಆರೋಗ್ಯಕರವಾದ ಆಲೋಚನೆಗಳು ಮೂಡುತ್ತವೆ. ಹೆಚ್ಚೆಚ್ಚು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಆಸಕ್ತಿವಹಿಸುವುದರಿಂದ ನಿಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ. ಇದರಿಂದ ನಿಮ್ಮ ಪೋಷಕರಿಗಲ್ಲದೆ, ಶಿಕ್ಷಣ ಕಲಿಸಿದ ಗುರುಗಳಿಗೂ ಗೌರವ ದೊರಕುತ್ತದೆ. ಕಣ್ಣಿಗೆ ಕಾಣುವ ದೇವರುಗಳೆಂದರೆ ತಂದೆ, ತಾಯಿಗಳು. ತಂದೆ ಹಾಗೂ ತಾಯಿಗೆ ನಿತ್ಯ ನಮಸ್ಕರಿಸಿ ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಿರಿ. ಇದರಿಂದ ನಿಮ್ಮ ಮನಸ್ಸು ಕೂಡ ಉಲ್ಲಾಸಭರಿತವಾಗಿರುತ್ತದೆ. ಸಮಾಜದಲ್ಲಿ ಸಂಸ್ಕಾರಯುತ ಮನುಷ್ಯನಾಗಿ ಬಾಳ ಬೇಕಾದರೆ ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.ಶಾಲೆ ಮುಖ್ಯ ಶಿಕ್ಷಕ ವಿ.ಡಿ.ಜಾನ್ ಮಾತನಾಡಿ, ಮಕ್ಕಳಿಗೆ ಇಂತಹ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿಯೇ ಮಕ್ಕಳು ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಲು ಸಹಕಾರವಾಗುತ್ತದೆ. ಮಕ್ಕಳು ತಮ್ಮ ಮನಸ್ಸಿನಲ್ಲಿ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂತಹ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಮೊಬೈಲ್ ಬಳಕೆ ಉಪಯೋಗ ಹಾಗೂ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆ ದೈಹಿಕ ಶಿಕ್ಷಕಿ ಕೆ.ಜೆ.ಜಾನ್ಸಿ, ಶಿಕ್ಷಕರಾದ ಎಂ.ಜೆ.ಜಾನ್ಸಿ, ದೇವಸಿ, ಜೋಸ್, ಜಗದೀಶ್, ಎ. ಸತೀಶ್, ಶೆಟ್ಟಿಕೊಪ್ಪ ವೃತ್ತದ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್, ಜಗದೀಶ್, ದೇವಸಿ ಇದ್ದರು.