ಅರಕಲಗೂಡಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

| Published : Oct 18 2024, 12:09 AM IST

ಸಾರಾಂಶ

ಜಯಂತಿ ಉತ್ಸವಗಳು ಜಾಗೃತಿ, ಜನಾಂಗೀಯ ತೇರನ್ನು ಎಳೆಯುವ, ಉದಾತ್ತ ಚಿಂತನೆ, ಮಂಥನಗಳನ್ನು ಮುಂದಿನ ಮನ್ವಂತರಕ್ಕೆ ಕೊಂಡೊಯ್ಯುವ ಮಾನವ ಸೇತುವೆಯಾಗಿದೆ ಎಂದು ಪ್ರಧಾನ ಭಾಷಣಕಾರ ಸತೀಶ್‌ ಅಲ್ಲಾಪಟ್ಟಣ ತಿಳಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಂತಿ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತೇವೆ. ಜನಾಂಗದ ಪ್ರೇರಣೆ, ಪೋಷಣೆ ಇಲ್ಲದಿದ್ದರೆ ಯಾವ ಆಚರಣೆಗಳು ಯಶಸ್ವಿಯಾಗುವುದಿಲ್ಲ. ಇದಕ್ಕೆ ಜನಾಂಗೀಯ ಸಹಾಭಾಗಿತ್ವ ಮುಖ್ಯ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಜಯಂತಿ ಉತ್ಸವಗಳು ಜಾಗೃತಿ, ಜನಾಂಗೀಯ ತೇರನ್ನು ಎಳೆಯುವ, ಉದಾತ್ತ ಚಿಂತನೆ, ಮಂಥನಗಳನ್ನು ಮುಂದಿನ ಮನ್ವಂತರಕ್ಕೆ ಕೊಂಡೊಯ್ಯುವ ಮಾನವ ಸೇತುವೆಯಾಗಿದೆ ಎಂದು ಪ್ರಧಾನ ಭಾಷಣಕಾರ ಸತೀಶ್‌ ಅಲ್ಲಾಪಟ್ಟಣ ತಿಳಿಸಿದರು.

ಪಟ್ಟಣದ ಕೋಟೆ ಡಿ. ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಂತಿ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತೇವೆ. ಜನಾಂಗದ ಪ್ರೇರಣೆ, ಪೋಷಣೆ ಇಲ್ಲದಿದ್ದರೆ ಯಾವ ಆಚರಣೆಗಳು ಯಶಸ್ವಿಯಾಗುವುದಿಲ್ಲ. ಇದಕ್ಕೆ ಜನಾಂಗೀಯ ಸಹಾಭಾಗಿತ್ವ ಮುಖ್ಯ ಎಂದರು.

ಶಾಸಕ ಎ. ಮಂಜು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಮಹಾನ್ ವ್ಯಕ್ತಿ, ಇವರು ಬರೆದ ರಾಮಾಯಣ ಜಗತ್ತಿಗೆ ಮಾದರಿಗ್ರಂಥವಾಗಿದೆ. ಈ ಗ್ರಂಥದ ಸಾರಾಂಶವನ್ನು ಜನರಿಗೆ ತಿಳಿಸಲು ನಾಟಕಗಳನ್ನು ಮಾಡುತ್ತಿದ್ದರು. ಇಂದು ಬಿಡುಗಡೆಯಾದ ಕಾರ್ಯಕ್ರಮಗಳು ವರ್ಷವಿಡೀ ಓಡಬಹುದು. ಆದರೆ, ಸಾವಿರಾರು ವರ್ಷ ಕಳೆದರೂ ರಾಮಾಯಣ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

ಪೋಷಕರು ಮಕ್ಕಳಿಗೆ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದಿಸುವ ಹವ್ಯಾಸ ಮಾಡಿಸಬೇಕು. ಇದರಿಂದ ಮಕ್ಕಳಿಗೆ ಆದರ್ಶವಾಗಿ ಹೇಗೆ ಬದುಕಬೇಕೆಂದು ಅರಿವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್‌ ಸೌಮ್ಯ, ಪಪಂ ಉಪಾಧ್ಯಕ್ಷ ಸುಭಾನ ಷರೀಫ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಸದಸ್ಯೆ ರಶ್ಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌ ಮತ್ತಿತರಿದ್ದರು.