ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಭಾವೈಕ್ಯತೆಯ ಜಾತ್ರೆ ಎಂದೇ ಹೆಸರಾದ ತಾಲೂಕಿನ ದೋಟಿಹಾಳ ಗ್ರಾಮದ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರಾಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಮಂಗಳವಾರ ಸಂಜೆ 6.30ಕ್ಕೆ ಭಕ್ತ ಸಾಗರದ ಮಧ್ಯೆ ಸಡಗರ ಸಂಭ್ರಮದಿಂದ ಶಾಂತಿಯುತ,ಶ್ರದ್ಧಾ-ಭಕ್ತಿಯಿಂದ ಜರುಗಿತು.

ಜಾತ್ರಾಮಹೋತ್ಸವದ ಅಂಗವಾಗಿ ಬೆಳಗ್ಗೆ ಶುಕಮುನಿ ಶ್ರೀಗಳ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ಮಹಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಬೆಳಗ್ಗೆ ರಥದ ಮುಂದೆ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ದೋಟಿಹಾಳ, ಕೇಸೂರು, ಹೆಸರೂರು, ಜಾಲಿಹಾಳ,ಇಲಕಲ್ಲ,ವಿಜಯಪುರ, ಬಾಗಲಕೋಟ, ಗದಗ, ಸೇರಿದಂತೆ ಅನೇಕ ಗ್ರಾಮಗಳಿಂದ ಆಗಮಿಸಿದ ಭಕ್ತರು ಉರುಳು ಸೇವೆ, ದೀರ್ಘದಂಡ ನಮಸ್ಕಾರ ಸೇರಿದಂತೆ ಇನ್ನಿತರ ಧಾರ್ಮಿಕ ಮಾಡುತ್ತಿರುವದು ಮಠದ ಅಂಗಳದಲ್ಲಿ ಕಂಡು ಬಂತು.

ಶುಕಮುನಿ ತಾತನ ಮಹಾರಥೋತ್ಸವ ಜರುಗುವ ಮುಂಚಿತವಾಗಿ ಶ್ರೀಗಳ ಪಲ್ಲಕ್ಕಿ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಥದ ಬೀದಿಗೆ ಬಂದು ಭೂಮಿ ತಾಯಿಗೆ ಬಲಿ ಅನ್ನದ ಸಮರ್ಪಣೆ ಮಾಡುವ ಮೂಲಕ ರಥದ ಬೀದಿಯಲ್ಲಿ ಪಲ್ಲಕ್ಕಿಯು ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಸಂಚರಿಸಿತು.


ಜಯಘೋಷ: ರಥದ ಬೀದಿಯಲ್ಲಿ ಇರುವ ಸಹಸ್ರಾರು ಭಕ್ತರು ಜಯ ಘೋಷಣೆಗಳಾದ ಜೈ ಶುಕಮುನಿ, ಜೈ ಜೈ ಶುಕಮುನಿ ಓಂ ನಮಃ ಶಿವಾಯ, ಶುಕಮುನಿಸ್ವಾಮಿ ಮಾರಾಜಿಕಿ ಜೈ ಸೇರಿದಂತೆ ಅನೇಕ ಜಯಘೋಷ ಕೂಗುತ್ತಾ ಅವಧೂತ ಶುಕಮುನಿ ಮಹಾಸ್ವಾಮಿಗಳ ಮಹಾರಥವನ್ನು ಭಕ್ತರು ಎಳೆದು ತಾತನ ಕೃಪೆಗೆ ಪಾತ್ರರಾದರು.

ಮಹಾರಥೋತ್ಸವಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು.

ಈ ಸಂದರ್ಭ ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ದೊಡ್ಡ ಬಸವನಗೌಡ ಬಯ್ಯಾಪುರ, ತಹಸೀಲ್ದಾರ ಅಶೋಕ ಶಿಗ್ಗಾಂವಿ, ಕಂದಾಯ ನಿರೀಕ್ಷಕ ಅಬ್ದುಲರಜಾಕ್ ಮದಲಗಟ್ಟಿ, ಬಸವರಾಜ ಕ್ಯಾವಟರ್, ಮಹಾಂತೇಶ ಬಾದಾಮಿ, ಕೆ.ಮಹೇಶ, ಮಹೇಶ ಕಾಳಗಿ, ಲಾಡ್ಲೇಮಷಾಕ ದೋಟಿಹಾಳ, ಸುರೇಶ ಕುಂಟನಗೌಡ್ರ, ವಿಜಯನಾಯಕ ಸೇರಿದಂತೆ ದೋಟಿಹಾಳ ಹಾಗೂ ಕೇಸೂರು ಗ್ರಾಮದ ಗಣ್ಯರು,ಸಾರ್ವಜನಿಕರು ಇದ್ದರು.

ಮಹಾರಾಷ್ಟ್ರ, ಕೇರಳ,ಆಂಧ್ರಪ್ರದೇಶ,ಬಾಗಲಕೋಟೆ, ವಿಜಯಪುರ,ರಾಯಚೂರ, ಕೊಪ್ಪಳ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿವಿಧ ಗ್ರಾಮಗಳಿಂದ 60 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವ ಸಂದರ್ಭದಲ್ಲಿ ಕುಷ್ಟಗಿ ಪ್ರಭಾರಿ ಸಿಪಿಐ ಡಿ.ಎಸ್.ಆಂಜನೇಯ, ಪಿಎಸೈ ಹನಮಂತಪ್ಪ ತಳವಾರ,ಹನುಮಸಾಗರ ಪಿಎಸೈ ಧನುಂಜಯ, ತಾವರಗೇರಾ ಪಿಎಸೈ ಚಂದ್ರಪ್ಪ, ಎಎಸೈ ತಾಯಪ್ಪ,ಮುತ್ತಣ್ಣ ಸೇರಿದಂತೆ 400ಕ್ಕೂ ಅಧಿಕ ಜನ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಪೊಲೀಸ್‌ ಬಂದೋಬಸ್ತ್ ಒದಗಿಸಿದ್ದರು.