ಚಿಕ್ಕಮಗಳೂರು1955ರಲ್ಲಿ ₹1,400 ಬಂಡವಾಳದೊಂದಿಗೆ ಆರಂಭಗೊಂಡ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಸಿಡಿಸಿಸಿ) ಇಂದು ಸುಮಾರು ₹3,000 ಕೋಟಿ ವಾರ್ಷಿಕ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಸಿ.ಟಿ. ರವಿ ಮಾಹಿತಿ । ನಗರದ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ 72ನೇ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು1955ರಲ್ಲಿ ₹1,400 ಬಂಡವಾಳದೊಂದಿಗೆ ಆರಂಭಗೊಂಡ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಸಿಡಿಸಿಸಿ) ಇಂದು ಸುಮಾರು ₹3,000 ಕೋಟಿ ವಾರ್ಷಿಕ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ನಗರದ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ 72ನೇ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತ ನಾಡಿದ ಅವರು, ಬ್ಯಾಂಕ್ ₹1,500 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದು, ₹850 ಕೋಟಿ ಗೂ ಹೆಚ್ಚು ಕೃಷಿ ಸಾಲ ವಿತರಿಸುತ್ತಿದೆ ಎಂದರು.ಕಳೆದ 12 ವರ್ಷಗಳಿಂದ ಬ್ಯಾಂಕ್ ನಿರಂತರ ಲಾಭ ಗಳಿಸುತ್ತಿದ್ದು, ನಬಾರ್ಡ್ನ ಪರಿವೀಕ್ಷಣೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಪಡೆಯುತ್ತಿದೆ. ತಂತ್ರಜ್ಞಾನ ಅಳವಡಿಸಿಕೊಂಡು ಬ್ಯಾಂಕಿಂಗ್ ಸೇವೆ ವಿಸ್ತರಿಸಲು ಹೆಚ್ಚಿನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ನೊಂದಿಗೆ ನಿರಂತರವಾಗಿ ವ್ಯವಹರಿಸುವ ಜತೆಗೆ, ಇತರ ಸಂಘಗಳೂ ಬ್ಯಾಂಕ್ನಲ್ಲಿ ಠೇವಣಿ ಇಟ್ಟು ವ್ಯವಹಾರ ವೃದ್ಧಿಗೆ ಸಹಕರಿಸಬೇಕು. ಇದರಿಂದ ಅಗತ್ಯ ಸಂದರ್ಭದಲ್ಲಿ ಸಂಘಗಳು ಹಾಗೂ ಸದಸ್ಯರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ನೆರವು ನೀಡಲು ಸಾಧ್ಯ ಎಂದರು.ಬ್ಯಾಂಕ್ ಅನ್ನು ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿಗೆ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸದಸ್ಯರ ಸಲಹೆಗಳನ್ನು ಬ್ಯಾಂಕಿನ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಪರಿಶೀಲಿಸಿ ಸಾಧ್ಯವಾದಷ್ಟು ಅನುಷ್ಠಾನ ಗೊಳಿಸಲಾಗುವುದು ಎಂದು ಹೇಳಿದರು.ಸಹಕಾರ ಕ್ಷೇತ್ರದ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರ ಜತೆಗೆ ವಿಧಾನ ಮಂಡಲದಲ್ಲೂ ಸಹಕಾರಿಗಳ ಧ್ವನಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷ ಕೆ. ದಿನೇಶ್, ನಿಕಟಪೂರ್ವ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಸುರೇಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ನಿರ್ದೇಶಕರಾದ ಕೆ.ಆರ್. ಆನಂದಪ್ಪ, ಎಚ್.ಪಿ. ಶಿವಣ್ಣ, ಟಿ.ಎಲ್. ರಮೇಶ್, ದಿನೇಶ್ ಹೆಗಡೆ, ಎಸ್.ವಿ. ಬಸವ ರಾಜಪ್ಪ, ಕೆ.ಸಿ. ಜಯಪಾಲ್, ಬಿ.ಎಸ್. ಸತೀಶ್, ಎಸ್.ಟಿ. ಸೋನಲ್ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ನಾಯಕ್ ಸೇರಿದಂತೆ ಸಹಕಾರ ಸಂಘಗಳ ಪ್ರತಿನಿಧಿಗಳು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.