ಕನ್ನಡಪ್ರಭವಾರ್ತೆ ಮಡಿಕೇರಿ

ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಿದ್ದಾಪುರ ಪಿಎಸ್ಐ ಮಂಜುನಾಥ್ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ. ರಸ್ತೆ ಅಪಘಾತಗಳಲ್ಲಿ ಆಗುವ ಪ್ರಾಣಹಾನಿಯನ್ನು ತಡೆಯಲು, ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರರನ್ನು ತಡೆದು ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಯಿತು. ಅಪಘಾತ ಸಂಭವಿಸಿದಾಗ ತಲೆಗೆ ಆಗುವ ಗಂಭೀರ ಗಾಯಗಳಿಂದ ಬದುಕುಳಿಯಲು ಹೆಲ್ಮೆಟ್ ಏಕೈಕ ಕವಚವಾಗಿದೆ. ಪೊಲೀಸರ ಭಯಕ್ಕಾಗಿ ಅಥವಾ ದಂಡದಿಂದ ಪಾರಾಗಲು ಹೆಲ್ಮೆಟ್ ಧರಿಸಬೇಡಿ; ನಿಮ್ಮ ಜೀವ ಮತ್ತು ಕುಟುಂಬದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಇದೇ ಸಂದರ್ಭ ಮಂಜುನಾಥ್ ಮನವಿ ಮಾಡಿದ್ದಾರೆ. ಈ ವೇಳೆ ಪ್ರೊಬೇಷನರಿ ಎಎಸ್ಐ ಚೈತ್ರಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.