ಸಿದ್ದರಾಮಯ್ಯ ಈಗ ಕೋವಿಡ್ ಹಗರಣ, ತನಿಖೆ ಮಾಡ್ತೀವಂದ್ರೆ ಏನರ್ಥ?: ಬಿ.ಸಿ.ಪಾಟೀಲ್‌ ಕಿಡಿ

| Published : Sep 02 2024, 02:09 AM IST

ಸಿದ್ದರಾಮಯ್ಯ ಈಗ ಕೋವಿಡ್ ಹಗರಣ, ತನಿಖೆ ಮಾಡ್ತೀವಂದ್ರೆ ಏನರ್ಥ?: ಬಿ.ಸಿ.ಪಾಟೀಲ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಬದಲಾವಣೆಯಾಗಿ 14 ತಿಂಗಳಾಗುತ್ತಾ ಬಂದಿದೆ. ಈವರೆಗೂ ಸುಮ್ಮನಿದ್ದವರು ಈಗ ಕೋವಿಡ್ ಹಗರಣದ ತನಿಖೆ ಮಾಡುತ್ತೇವೆಂದರೆ ಏನರ್ಥ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

- ವಿಪಕ್ಷದಲ್ಲಿದಾಗ ಯಾಕೆ ಸುಮ್ನಿದ್ರು, ಅದರಲ್ಲೇನಾದ್ರೂ ಪಾಲು ಇತ್ತಾ ಎಂದು ಪ್ರಶ್ನೆ -ಅದೇನೋ ಬಿಚ್ಚಿಡ್ತೀನಿ ಅಂತಾರಲ್ವಾ, ಬಿಚ್ಚಿಡಲಿ ನಾವೂ ನೋಡ್ತೀವಿ ಎಂದ ಮಾಜಿ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರ ಬದಲಾವಣೆಯಾಗಿ 14 ತಿಂಗಳಾಗುತ್ತಾ ಬಂದಿದೆ. ಈವರೆಗೂ ಸುಮ್ಮನಿದ್ದವರು ಈಗ ಕೋವಿಡ್ ಹಗರಣದ ತನಿಖೆ ಮಾಡುತ್ತೇವೆಂದರೆ ಏನರ್ಥ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಹಗರಣವೆಂದು ಈಗ ಹೇಳುತ್ತಿರುವವರು ಹಿಂದೆ ವಿಪಕ್ಷದಲ್ಲಿದ್ದು ಸುಮ್ಮನಿದ್ದರೆಂದರೆ ಅವತ್ತು ಕೋವಿಡ್ ಹಗರಣದಲ್ಲಿ ಇವರಿಗೂ ಪಾಲು ಇತ್ತಾ? ಮತ್ತೆ ಆಗ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದು 14 ತಿಂಗಳು ಸುಮ್ಮನಿದ್ದರು. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ವಿಪಕ್ಷದಲ್ಲಿದ್ದರು ಸುಮ್ಮನಿದ್ದರು. ಕೋವಿಡ್ ಹಗರಣದ ತನಿಖೆಗೆ ಸೂಚನೆ ನೀಡುತ್ತೇವೆನ್ನುವವರು ಆವಾಗೆಲ್ಲಾ ಏನು ಮಾಡುತ್ತಿದ್ದರು? ಅದೇನೋ ಬಿಚ್ಚಿಡ್ತೀನಿ, ಬಿಚ್ಚಿಡ್ತೀನಿ ಅಂತಾ ಹೇಳುತ್ತಾರಲ್ಲವಾ, ಬಿಚ್ಚಿಡಲಿ ನೋಡೋಣ ಎಂದು ಕಿಡಿಕಾರಿದರು.

ಬಿಜೆಪಿಯವರು ವಿನಾಕಾರಣ ಆಪರೇಷನ್ ಕಮಲ ಮಾಡುತ್ತಾರೆಂದು ಕಾಂಗ್ರೆಸ್ಸಿನವರು ಆರೋಪಿಸುತ್ತಿದ್ದಾರೆ. 136 ಶಾಸಕರಿದ್ದು, ಇದು ಹೇಗೆ ಸಾಧ್ಯ? ₹100 ಕೋಟಿಗೆ ಖರೀದಿ ಮಾಡುತ್ತಾರೆಂದು ತಮ್ಮ ತಲೆಗೆ ತಾವೇ ಹಣ ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸಬೇಕೆಂದರೆ 90 ಶಾಸಕರು ಬೇಕು. ಇದೆಲ್ಲಾ ಸಾಧ್ಯವೇ ಎಂದು ಬಿ.ಸಿ.ಪಾಟೀಲ್‌ ಪ್ರಶ್ನಿಸಿದರು.

- - -

ಕೋಟ್‌

ಕಾಂಗ್ರೆಸ್ಸಿನವರ ಕೈಯಲ್ಲಿ ಹೇಳುವುದಕ್ಕೆ ಯಾವುದೇ ಸರಿಯಾದ ಕೆಲಸ ಇಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲಾ ಮಾಡುತ್ತಿದ್ದಾರೆ

- ಬಿ.ಸಿ.ಪಾಟೀಲ್, ಮಾಜಿ ಸಚಿವ

- - - (-ಫೋಟೋ:)