ಸಾರಾಂಶ
ಮುಖ್ಯಮಂತ್ರಿಗಳು ತಾವು ಒಂದು ಸಮುದಾಯದ ಪರವಾಗಿದ್ದೇವೆ ಎಂದು ಹೇಳುವುದು ಸರಿಯಲ್ಲ, ಇದರಿಂದ ಬಹುಸಂಖ್ಯಾತ ಹಿಂದು ಸಮಾಜಕ್ಕೆ ನೋವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮುಖ್ಯಮಂತ್ರಿಗಳು ತಾವು ಒಂದು ಸಮುದಾಯದ ಪರವಾಗಿದ್ದೇವೆ ಎಂದು ಹೇಳುವುದು ಸರಿಯಲ್ಲ, ಇದರಿಂದ ಬಹುಸಂಖ್ಯಾತ ಹಿಂದು ಸಮಾಜಕ್ಕೆ ನೋವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಎಚ್ಚರಿಕೆ ನೀಡಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರ ಮುಸ್ಲಿಮರನ್ನು ಓಲೈಸುವ ಹೇಳಿಕೆಗೆ ಪೇಜಾವರ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅವರು ಒಂದು ಸಮುದಾಯ ವರ್ಗದ ಜೊತೆ ನಿಲ್ಲುತ್ತೇವೆ, ನಿಮ್ಮ ಪಾಲು ಕೊಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ತೀವ್ರವಾಗಿ ಪ್ರಶ್ನಿಸಿರುವ ಶ್ರೀಗಳು, ಇದರಿಂದ ಹಿಂದೂ ಸಮಾಜವನ್ನು ಯಾರು ಕೇಳುವವರಿಲ್ಲ ಎಂಬ ಭಾವನೆ ಬರುತ್ತದೆ. ಇಂತಹ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗುತ್ತದೆ ಎಂದಿದ್ದಾರೆ.ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ಜಾತ್ಯತೀತವಾಗಿರಬೇಕು. ಎಲ್ಲರನ್ನು ಸದ್ಭಾವದಿಂದ ಕಾಣುವುದು, ಯಾರಿಗೂ ತೊಂದರೆ ಆಗದಂತೆ ಎಲ್ಲ ಪ್ರಜೆಗಳಿಗೆ ಅನುಕೂಲ ಮಾಡಿಕೊಡುವುದು ಸಂವಿಧಾನ ಬದ್ಧವಾಗಿ ಆಯ್ಕೆಯಾದ ಸರ್ಕಾರದ ಜವಾಬ್ದಾರಿಯಾಗಿದೆ. ಅಧಿಕಾರ ಸ್ಥಾನದಲ್ಲಿರುವವರು ಎಲ್ಲರನ್ನ ಹೊಂದಿಸಿಕೊಂಡು ಹೋಗಬೇಕು ಹಾಗಿದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.