ಬಿಜೆಪಿಗೆ ಸಿದ್ದರಾಮಯ್ಯ ಟಾರ್ಗೆಟ್: ಜಮೀರ್‌

| Published : Sep 02 2024, 02:08 AM IST

ಸಾರಾಂಶ

ಸಿದ್ದರಾಮಯ್ಯ ಹಿಂದುಳಿದ ವರ್ಗ ನಾಯಕ ಎನ್ನುವ ಕಾರಣದಿಂದ ಬಿಜೆಪಿ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ಜನರ ಮುಖ್ಯಮಂತ್ರಿ. ಅಂಥವರ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಸಚಿವ ಜಮೀರ್‌ಖಾನ್‌ ಹೇಳಿದರು.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್‌ ಪತನವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಅದಕ್ಕೆ ಸಿದ್ದರಾಮಯ್ಯ ಟಾರ್ಗೆಟ್‌ ಆಗಿದ್ದಾರೆ. ಇದರಿಂದ ಏನು ಸಮಸ್ಯೆಯಾಗಲ್ಲ ಎಂದು ವಸತಿ ಸಚಿವ ಜಮೀರ ಅಹಮದ್ ಖಾನ್‌ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ವರ್ಗ ನಾಯಕ ಎನ್ನುವ ಕಾರಣದಿಂದ ಬಿಜೆಪಿ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ಜನರ ಮುಖ್ಯಮಂತ್ರಿ. ಅಂಥವರ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದರೆ ಏನರ್ಥ? ಈ ಕಾರಣಕ್ಕಾಗಿಯೇ ನಾವು ರಾಜಭವನ ಚಲೋ ಹೋರಾಟ ಮಾಡಿದೇವು ಎಂದರು.

ದೂರು ಕೊಟ್ಟ ದಿನದಂದೇ ರಾಜ್ಯಪಾಲರು ನೋಟಿಸ್ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ಅದಕ್ಕಿಂತ ಮುಂಚೆಯೇ ನವೆಂಬರ್‌ನಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖಾ ಸಂಸ್ಥೆಯೇ ದೂರು ಕೊಟ್ಟರೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲ್ಲ. ಅದಕ್ಕಿಂತ ಮುಂಚೆಯೇ ಲೋಕಾಯುಕ್ತರು ನವೆಂಬರ್‌ನಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರು. ಆದರೂ ಅನುಮತಿ ಸಿಗಲ್ಲ. ಮುರಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧ ತನಿಖೆಗೂ ಅನುಮತಿ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಮುಡಾ ಸೈಟ್‌ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಲಿಂಗಾ ಎನ್ನುವವವರು 1935ರಲ್ಲಿ ಭೂಮಿ ಖರೀದಿಸಿದ್ದರು. ಆಗ ಸಿದ್ದರಾಮಯ್ಯ ಹುಟ್ಟಿಯೇ ಇರಲಿಲ್ಲ. ಅವರಿಂದ ಸಿದ್ದರಾಮಯ್ಯ ಭಾವಮೈದನನಿಗೆ ಬಂದಿದೆ. ಅವರು ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿದ್ದರು. ಆಗಿನ ಸರ್ಕಾರ ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿದೆ. ಇವರೊಬ್ಬರಿಗೆ ಕೊಟ್ಟಿದ್ದಲ್ಲ. 125 ಜನರಿಗೆ ಸೈಟ್‌ ಕೊಡಲಾಗಿದೆ. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು ಎಂದರು.

ನಮ್‌ ಟಗರು ಅದು:

ಸಿದ್ದರಾಮಯ್ಯ ಭಯ ಬೀಳುವ ಪ್ರಶ್ನೆಯೇ ಇಲ್ಲ. ಅವರು ಯಾವಾಗಲೂ ಹುಲಿಯೇ. ಟಗರು ಅದು. ಟಗರು ಯಾವ ರೀತಿ ಹೂಂಕರಿಸುತ್ತದೆಯೋ ಆ ರೀತಿ ಹೂಂಕರಿಸಿದರೆ ಮುಗೀತು ಎಂದರು.

ಸಿದ್ದರಾಮಯ್ಯ ಜನಪರತೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ಸರ್ಕಾರವನ್ನು ಅಭದ್ರಗೊಳಿಸಲು ಈ ರೀತಿ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ಹೆದರಿಲ್ಲ. ಹೆದರುವ ಅವಶ್ಯಕತೆಯೂ ಇಲ್ಲ. ಹೈಕಮಾಂಡ್‌, ಎಲ್ಲ ಶಾಸಕರು, ಜತೆಗೆ ರಾಜ್ಯದ ಜನತೆಯೂ ಅವರೊಂದಿಗಿದೆ ಎಂದರು.

ಹೈಕೋರ್ಟ್‌ನಲ್ಲಿ ವಾದ ನೋಡುತ್ತಿರುವ ಬಿಜೆಪಿಗೆ ಈ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವುದು ಗೊತ್ತಾಗಿದೆ. ಈ ಕಾರಣದಿಂದ ಮುಡಾ ಹಗರಣವನ್ನು ಕಾಂಗ್ರೆಸ್‌ನವರೇ ಹೊರಹಾಕಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.ದರ್ಶನ ಬಳ್ಳಾರಿಗೆ ನನ್ನ ಪಾತ್ರವಿಲ್ಲ: ಜಮೀರ್‌

ಚಿತ್ರನಟ ದರ್ಶನ ಬಳ್ಳಾರಿಗೆ ಜೈಲಿಗೆ ಶಿಫ್ಟ್‌ ಮಾಡುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಅದನ್ನು ಪೊಲೀಸ್‌ ಇಲಾಖೆ, ಕಾರಾಗೃಹ ಇಲಾಖೆ ಮಾಡಿದೆ. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ. ಡಿಜಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಜಮೀರ್‌ ಪ್ರತಿಕ್ರಿಯೆ ನೀಡಿದರು.