ಕಾಂಗ್ರೆಸ್‌ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧವಾಗಿರುತ್ತೇವೆ.

ಹೊಸಪೇಟೆ: ಸಿದ್ದರಾಮಯ್ಯ ಅವರೇ 2028ರ ವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿಶ್ವಾಸ ವ್ಯಕ್ತಪಡಿಸಿದರು.

ಹಂಪಿಯಲ್ಲಿ ಉತ್ಸವದ ಸಿದ್ಧತೆ ಪರಿಶೀಲಿಸಿದ ನಂತರ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಹೈಕಮಾಂಡ್‌ ಬೀದಿಯಲ್ಲಿ ಹೋಗೋ ದಾಸಯ್ಯನ ಮುಖ್ಯಮಂತ್ರಿಯನ್ನಾಗಿ ಮಾಡಿದ್ರೂ ನಾವು ಒಪ್ಪಿಕೊಳ್ಳುತ್ತೇವೆ. ಆದರೆ, 2028ರ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರದ್ದೇ ನೇತೃತ್ವ ಇರುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಹೇಡಿ ಎಂಬ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಜನಾರ್ದನ ರೆಡ್ಡಿಗೆ ಯಾವುದೇ ನಿಲುವು ಎನ್ನುವುದು ಇಲ್ಲ. ರೆಡ್ಡಿ ಯಾವ ಕಡೆ ಯಾವಾಗ ವಾಲುತ್ತಾರೋ ಗೊತ್ತಿಲ್ಲ. ಸಮಯ, ಸಂದರ್ಭಕ್ಕೆ ತಕ್ಕಂತೆ ಇರ್ತಾರೆ. ಅವರ ಮಾತನ್ನು ಯಾರೂ ನಂಬುತ್ತಿಲ್ಲ. ಅವರಿಗೆ ಯಾವುದೇ ಬದ್ಧತೆ ಇಲ್ಲ. ರಾಜಕಾರಣಿ ಅಲ್ಲ, ಅವರೊಬ್ಬ ಉದ್ಯಮಿ. ಅವರ ಬಗ್ಗೆ ನಾವು ಮಾತನಾಡುವುದು ಸಮಯ ವ್ಯರ್ಥ ಎಂದರು.

ಬಿಜೆಪಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ಅಭ್ಯಾವಿದೆ. 2008ರಿಂದ 2011ರ ವರೆಗೆ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರು. ಕಾಂಗ್ರೆಸ್‌ನಲ್ಲಿ ಆ ಪದ್ಧತಿ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೆಹಲಿಯಲ್ಲಿ ನಡೆಯುತ್ತಿರುವ ಸಭೆಗೆ ಹೋಗಿದ್ದಾರೆ. ಹೈಕಮಾಂಡ್ ಭೇಟಿ ಮಾಡಲು ಅವರೇನು ತಡಕಾಡುತ್ತಿಲ್ಲ. ನಮ್ಮ ಹೈಕಮಾಂಡ್‌ ನಾಯಕರು ಎಲ್ಲರಿಗೂ ಸಿಗುತ್ತಾರೆ ಸಚಿವ ಜಮೀರ್‌.