ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ದೇಶ್ವರ ಸ್ವಾಮೀಜಿಯವರು ಹುಟ್ಟಿದ ಭೂಮಿಯಲ್ಲಿ ಹುಟ್ಟಿದ ನಾವೇ ಪುಣಿತರು. ಅಪ್ಪಾಜಿಯವರ ಮಾತುಗಳಲ್ಲಿ ಬರೀ ನಾಲ್ಕಾನೆ ಭಾಗ ನಮ್ಮಲ್ಲಿ ಅಳವಡಿಸಿಕೊಂಡರೇ ನಮ್ಮ ಬದುಕು ಪಾವನವಾಗುತ್ತದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾಸ್ವಾಮೀಜಿಯವರ ಗುರುನಮನ ಮಹೋತ್ಸವ ಅಂಗವಾಗಿ ಜ್ಞಾನಾರಾಧನೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದ ಆತ್ಯಂತ ಸರಳ ಮತ್ತು ಜಗತ್ತಿನ ಶ್ರೇಷ್ಠ ಸಂತ ಅದು ಸ್ವಾಮೀಜಿಯವರು. ಅವರ ಜೀವನದುದ್ದಕ್ಕೂ ನಮಗೆ ಜ್ಞಾನಾರಾಧನೆ ಮಾಡಿದಂತವರು ಅಂತಹವರ ನೆರಳಲ್ಲಿ ನಾವು, ನೀವೆಲ್ಲವೂ ಬೆಳೆದಿದ್ದೇವೆ ಎಂದರೆ ಅದು ನಮ್ಮ ಪುಣ್ಯ. ಹೀಗಾಗಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರು ಕಲಿಸಿದ ಸತ್ಯದ ದಾರಿಯಲ್ಲಿ ನಡೆಯುವ ಮೂಲಕ ನಾವು ಅವರಿಗೆ ನಿಜವಾದ ಗುರುನಮನ ಸಲ್ಲಿಸೋಣ ಎಂದು ಕೋರಿದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರ ಬದುಕಿದ ಜೀವನ ಶೈಲಿ ಇಡೀ ಜಗತ್ತಿನ ಸಂತ ಸಮೂಹಕ್ಕೆ ಹಾಗೂ ಅವರ ಸರಳತೆ ನಮ್ಮೆಲ್ಲರ ಬದುಕಿಗೆ ಮಾದರಿ. ನಮಗೆ ಯಾವಾಗಲೂ ಉತ್ತಮ ಸಲಹೆಗಳನ್ನು ನೀಡುವ ಮೂಲಕ ನಮ್ಮನ್ನು ತಿದ್ದುತ್ತಿದ್ದರು. ನಮಗೆ ಎಂದಿಗೂ ಪ್ರಚಾರಕ್ಕಾಗಿ ಹೋರಾಟ, ಕೆಲಸಗಳನ್ನು ಮಾಡಬೇಡಿ ನಿಮ್ಮ ಹೋರಾಟ ಯಶಸ್ವಿಯಾಗಿ ನಿಮ್ಮ ಕೆಲಸಗಳು ಸಾರ್ಥಕತೆ ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆಗಳನ್ನು ನೀಡುವ ಮೂಲಕ ನಮ್ಮ ಬದುಕಿಗೆ ಪ್ರೇರಣೆಯಾಗಿದ್ದಾರೆ ಎಂದರು. ಜ್ಞಾನಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಜೀವನದೂದ್ದಕ್ಕೂ ಇಡೀ ಜಗತ್ತಿಗೆ ಜ್ಞಾನದಾಸೋಹ ಬಡಿಸಿದಂತವರು. ಅವರು ಬಿತ್ತಿದ ಜ್ಞಾನದ ಬೀಜ ನಮ್ಮಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಬೇಕಿದೆ. ಅವರು ನೀರೆರೆದ ಜ್ಞಾನದಲ್ಲಿ ಸ್ವಲ್ಪವಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದ್ದೇ ಆದಲ್ಲಿ ಅವರ ಆಶಯ ಸಾರ್ಥಕವಾಗುತ್ತದೆ ಎಂದು ನುಡಿದರು.ಮುಚಳಂಬಾ ನಾಗಭೂಷಣ ಶಿವಯೋಗಿಗಳ ಸಂಸ್ಥಾನ ಮಠದ ಪ್ರಣವಾನಂದ ಮಹಸ್ವಾಮಿಗಳು ಆಶೀರ್ವಚನ ನೀಡಿ, ಹೇಳುವುದು ಸರಳ ಮಾಡುವುದು ಬಹಳ ಕಷ್ಟ. ಆದರೆ, ಹೇಳಿದಂತೆ ಬದುಕಿ ಇಡೀ ಜಗತ್ತಿಗೆ ಪ್ರೇರಣೆಯಾದಂತವರು ಸಿದ್ದೇಶ್ವರ ಸ್ವಾಮೀಜಿಯವರು. ಅವರು ಬದುಕಿದ ದಿನಗಳಲ್ಲಿ ನಾವು ಕೂಡ ಬದುಕಿದ್ದೇವು ಎನ್ನುವುದು ನಮಗೆ ಹೆಮ್ಮೆ. ಸಿದ್ದೇಶ್ವರ ಅಪ್ಪಾಜಿಯವರು ಜ್ಞಾನೋಪಾಸಕರು. ಅವರು ಜ್ಞಾನದ ಮೂಲಕ ನಮಗೆ ಅಮೃತವನ್ನು ನೀಡಿದ್ದಾರೆ. ಬದುಕಿನಲ್ಲಿ ಅಧ್ಯಾತ್ಮದ ಕೀಲಿ ಮರೆತರೆ ನಿಮ್ಮ ಬದುಕು ನಿರರ್ಥಕವಾಗುತ್ತದೆ ಎಂದು ಸಿದ್ದೇಶ್ವರ ಅಪ್ಪಾಜಿಯವರು ನಮಗೆ ಹೇಳಿ ಹೋಗಿದ್ದಾರೆ. ಅವರು ಹೇಳಿದ ಮಾತನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.ಭಾಷಣಕಾರ ಮಹೇಶ ಮಾಶಾಳ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು. ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ. ನಮ್ಮಲ್ಲಿರುವ ಎಲ್ಲ ಹೊಲಸನ್ನು ಹೊರಗೆ ಹಾಕಿ ನಮ್ಮನ್ನು ಮತ್ತು ನಮ್ಮ ಬದುಕನ್ನು ಶುಚಿಗೊಳಿಸಿದ ಮಹಾತ್ಮರು. ನಮ್ಮೆಲ್ಲರ ಮನಸ್ಸೊಳಗೆ ಅರಿವಿನ ದೀಪ ಹಚ್ಚಿದ ಅಪ್ಪನವರು ನಮ್ಮ ಮನಸ್ಸಲ್ಲಿ ಎಂದೆಂದಿಗೂ ಇರುತ್ತಾರೆ ಎಂದರು.ಸಿದ್ದಣ್ಣ ಲಂಗೂಟಿ ಮಾತನಾಡಿ, ಸಿದ್ದೇಶ್ವರ ಅಪ್ಪಗಳು ವಿಶ್ವಜ್ಞಾನಿಗಳು, ಅವರು ಅಧ್ಯಾತ್ಮ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಆಶ್ರಮದಲ್ಲಿದ್ದ ಎಲ್ಲ ಗುರುಗಳು ವಿದ್ಯಾರ್ಥಿಗಳಲ್ಲಿ ವಿಶ್ವ ತತ್ವಜ್ಞಾನದ ಚಿಂತನೆಗೆ ಕರೆದುಕೊಂಡು ಹೋದವರು ಸಿದ್ದೇಶ್ವರ ಅಪ್ಪಗೋಳು ಎಂದು ಹೇಳಲು ಹರ್ಷವಾಗುತ್ತದೆ ಎಂದರು.ಭಾರತದ ೩೦ ಭಾಷೆಗಳಿಗೆ ನಮ್ಮ ಶರಣರ ವಚನಗಳು ಅನುವಾದಗೊಂಡಿವೆ. ೨೩ ಸಂಪುಟಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದಾರೆ. ೧೪ ವಿದೇಶಿ ಭಾಷೆಗಳಲ್ಲೂ ಅನುವಾದಗೊಳ್ಳುತ್ತಿದ್ದು ಶೀಘ್ರದಲ್ಲಿಯೇ ರಾಷ್ಟ್ರಪತಿ ಮುರ್ಮು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಒಟ್ಟು ೫೦ ವಿದೇಶಿ ಭಾಷೆಗಳಲ್ಲಿ ವಚನಗಳು ಅನುವಾದಗೊಳುತ್ತವೆ. ಇಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಎಂದು ಹೇಳಲು ಸಂತೋಷವೆನಸುತ್ತದೆ ಎಂದರು.ಇಸ್ಲಾಂ ವಿದ್ವಾಂಸರು ಕಾಶ್ಮೀರದಲ್ಲಿ ವಚನ ಅನುವಾದದ ಬಗ್ಗೆ ಕೇಳಿದಾಗ ಅದರಲ್ಲಿ ಮಾನವೀಯತೆಯ ಗುಣಗಳಿವೆ. ಹಾಗಾಗಿ ನಾವು ಅದನ್ನು ಅನುವಾದ ಮಾಡುತ್ತಿದ್ದೇವೆ ಎಂದು ಉತ್ತರ ನೀಡಿದರು. ಅಂತಹ ದಿವ್ಯ ಶಕ್ತಿ ನಮ್ಮ ವಚನಗಲ್ಲಿವೆ. ನಾವು ಅವುಗಳಲ್ಲಿನ ಜ್ಞಾನವನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಅವುಗಳು ನಮ್ಮ ಸಂಪತ್ತು ಎಂದು ಅವುಗಳನ್ನು ರಕ್ಷಣೆ ಮಾಡಿ ಬದುಕಬೇಕು. ಜಗತ್ತಿನಲ್ಲಿ ವಿಜ್ಞಾನ ಇದೆ, ಸುಜ್ಞಾನ ಇದೆ. ಆದರೆ, ಇಂದು ವಿಜ್ಞಾನದಿಂದ ಜಗತ್ತು ನಾಶದ ಕಡೆಗೆ ಹೊರಟಿದೆ. ಆದರೆ, ಸುಜ್ಞಾನದಿಂದ ಜಗತ್ತು ಬೆಳಗಲಿದೆ ಎಂದರು.ಈ ಸಮಯದಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಯವರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.