ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ತಾಲೂಕಿನ ಪ್ರಮುಖ ಅರಣ್ಯ ವಲಯಗಳಲ್ಲಿ ಒಂದಾದ ಈಶಾನ್ಯ ಅರಣ್ಯ ವಲಯದಲ್ಲಿ ಬರುವ ತಿಮ್ಮಪ್ಪನ ಗುಡಿಯ ಮಾರ್ಗದಲ್ಲಿ ಅಳಿವಿನಂಚಿನಲ್ಲಿರುವ ಕೊಂಡಗುರಿಗಳು (ನಾಲ್ಕು ಕೊಂಬಿನ ಜಿಂಕೆ) ರಸ್ತೆ ದಾಟುತ್ತಿರುವ ದೃಶ್ಯ ದೇವಸ್ಥಾನಕ್ಕೆ ಹೊರಟಿದ್ದವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಸಂಡೂರಿನ ಅರಣ್ಯದಲ್ಲಿ ಚಿರತೆ, ಕರಡಿ, ಮುಳ್ಳುಹಂದಿ, ಕಾಡುಹಂದಿ, ಚಿಪ್ಪುಹಂದಿ, ನವಿಲು, ನರಿ ಮುಂತಾದ ಕಾಡುಪ್ರಾಣಿ, ಪಕ್ಷಿಗಳು ಕಾಣಸಿಗುತ್ತವೆ. ಇವುಗಳಲ್ಲಿ ಇತ್ತೀಚೆಗೆ ಕೊಂಡಗುರಿ ಅಪರೂಪವಾಗುತ್ತಿವೆ. ಅಳಿವಿನಂಚಿನಲ್ಲಿರುವ ಕೊಂಡಗುರಿಗಳು ಈ ಭಾಗದಲ್ಲಿ ಕಾಣಿಸಿಕೊಂಡಿರುವುದು ಜನತೆಯಲ್ಲಿ ಸಂತೋಷದ ಜೊತೆಗೆ ಅಚ್ಚರಿ ಉಂಟು ಮಾಡಿವೆ.
ತಮ್ಮ ಕ್ಯಾಮೆರಾದಲ್ಲಿ ಕೊಂಡಗುರಿಗಳನ್ನು ಸೆರೆ ಹಿಡಿದ ಗಡಿಯಾರಂ ನಾಗೇಂದ್ರ ಕಾವೂರ್ ಕನ್ನಡಪ್ರಭದೊಂದಿಗೆ ಮಾತನಾಡಿ, ವಾರದ ಹಿಂದೆ ಸ್ನೇಹಿತ, ನಾಗು ಆರ್ಟ್ಸ್ ಸಂಸ್ಥೆಯ ಚಿತ್ರಕಲಾವಿದ ನಾಗರಾಜ್ ಜತೆ ಬೆಟ್ಟದಲ್ಲಿರುವ ತಿಮ್ಮಪ್ಪನ ದರ್ಶನಕ್ಕೆ ಬೈಕ್ನಲ್ಲಿ ಹೊರಟಿದ್ದೆವು. ತಿಮ್ಮಪ್ಪನ ದೇವಸ್ಥಾನಕ್ಕೂ ಮುಂಚೆ ಬರುವ ಗಣೇಶ ದೇವಸ್ಥಾನ ಹತ್ತಿರ ದರ್ಶನಕ್ಕಾಗಿ ನಿಂತಿದ್ದೆವು. ಆಗ ಅಲ್ಲಿ ಶಬ್ದ ಕೇಳಿಸಿತು. ನಾವು ಕಾಡುಹಂದಿ ಬರುತ್ತಿರಬಹುದು ಎಂದುಕೊಂಡು ಕ್ಯಾಮೆರಾ ಅಣಿ ಮಾಡಿಕೊಂಡೆವು. ನಮ್ಮ ಅದೃಷ್ಟಕ್ಕೆ ಎರಡು ಕೊಂಡುಗುರಿಗಳು ಓಡಿಬಂದು, ಬಂದಷ್ಟೇ ವೇಗವಾಗಿ ರಸ್ತೆ ದಾಟಿ ಮರೆಯಾದವು. ನಾವು ಮೊದಲೇ ಕ್ಯಾಮೆರಾ ಸಿದ್ಧಗೊಳಿಸಿದ್ದರಿಂದ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು ಎಂದರು.ಇದುವರೆಗೆ ಇಲ್ಲಿನ ಕಾಡುಗಳಲ್ಲಿ ನವಿಲು, ಕಾಡುಹಂದಿಗಳನ್ನು ಕಂಡಿದ್ದ ನಮಗೆ ಇದೇ ಮೊದಲ ಬಾರಿಗೆ ಕೊಂಡಗುರಿ ನೋಡಿ ಬಹಳ ಸಂತೋಷವಾಯಿತು. ನಂತರ ನಾವು ತಿಮ್ಮಪ್ಪನ ದರ್ಶನ ಮಾಡಿಕೊಂಡು ಮರಳಿದೆವು ಎಂದು ತಮ್ಮ ಸಂತಸ ಹಂಚಿಕೊಂಡರು.
ವನ್ಯಜೀವಿಧಾಮ ಘೋಷಿಸಲಿ:ಸಂಡೂರು ತಾಲೂಕಿನ ಕಾಡುಗಳಲ್ಲಿ ಕಾಡುಗುರಿಗಳು ಹೆಚ್ಚಿನ ಸಂಖೆಯಲ್ಲಿದ್ದವು. ಅವು ಸಂಘಜೀವಿ ಮತ್ತು ಬಹಳ ಚುರುಕಾದ ಪ್ರಾಣಿಗಳು. ಕಾಡಿಗಿಂತ ಕಾಡಂಚಿನ ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಹಲವು ಕಾರಣಗಳಿಂದಾಗಿ ಇತ್ತೀಚೆಗೆ ಇವುಗಳ ಸಂಖ್ಯೆ ಕ್ಷೀಣಿಸಿದೆ. ಈ ಜೀವಿಗಳು ತಿಮ್ಮಪ್ಪನ ಗುಡಿ ಭಾಗದಲ್ಲಿ ಕಾಣಿಸಿಕೊಂಡಿರುವುದನ್ನು ಕೇಳಿ ಬಹಳ ಸಂತೋಷವಾಯಿತು. ಅರಣ್ಯಜೀವಿಗಳ ರಕ್ಷಣೆಗಾಗಿ ತಾಲೂಕಿನಲ್ಲಿ ಯಾವುದಾದರು ಅರಣ್ಯ ಭಾಗವನ್ನು ವನ್ಯಜೀವಿಧಾಮವೆಂದು ಘೋಷಿಸಿ, ಅದನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಿದರೆ ಅರಣ್ಯ ಉಳಿಯಲಿದೆ. ಕಾಡು ಪ್ರಾಣಿಗಳ ಸಂರಕ್ಷಣೆಯೂ ಆಗಲಿದೆ. ಇದರಿಂದ ಮುಂದಿನ ತಲೆಮಾರುಗಳು ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳನ್ನು ನೋಡಲು, ತಿಳಿಯಲು ಅವಕಾಶವಾಗಲಿದೆ ಎನ್ನುತ್ತಾರೆ ಪರಿಸರವಾದಿ ಮೂಲಿಮನೆ ಈರಣ್ಣ.
ಅಳಿವಿನಂಚಿನಲ್ಲಿರುವ ಕೊಂಡಗುರಿ ಸಂಡೂರಿನ ಭಾಗದಲ್ಲಿ ಗೋಚರಿಸಿರುವುದು ಇಲ್ಲಿನ ಪರಿಸರವಾದಿಗಳಲ್ಲಿ, ಪ್ರಾಣಿಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.