ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸಿಬಿಟಿ ಹತ್ತಿರ ಎಐಡಿಎಸ್ಓ ವತಿಯಿಂದ ಭಾನುವಾರ ಸಾರ್ವಜನಿಕ ಶಿಕ್ಷಣ ಉಳಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಅವರ ಭಾವಚಿತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಸಹಿಗಳನ್ನು ಸಂಗ್ರಹಿಸಿದರು.ಸಂಯೋಜನೆ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 6,000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇದನ್ನು ವಿರೋಧಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ರಾಜ್ಯವ್ಯಾಪಿ 50 ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಹಬ್ ಆ್ಯಂಡ್ ಸ್ಪೋಕ್ ಮಾದರಿಯಡಿ ದಾಖಲಾತಿ ಕಡಿಮೆಯಿರುವ ಶಾಲೆಗಳನ್ನು ಸಂಯೋಜನೆಗೊಳಿಸಲಾಗುವುದೆಂದು ಸರ್ಕಾರ ತಿಳಿಸಿದೆ. ಅಂದರೆ, ಮಕ್ಕಳ ದಾಖಲಾತಿಗೆ ಕಾರಣ ಹುಡುಕಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಉತ್ತೇಜನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಶಾಲೆಗಳನ್ನು ಮುಚ್ಚುವುದರ ಮೂಲಕ ರಾಜ್ಯದ ಜನಸಾಮಾನ್ಯರಿಗೆ ಸರ್ಕಾರವು ದ್ರೋಹವೆಸಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 59 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದೆ. ರಾಜ್ಯದ 46,000 ಸರ್ಕಾರಿ ಶಾಲೆಗಳಲ್ಲಿ 21,000 ಶಾಲೆ ಕಟ್ಟಡಗಳು ಸೋರುತ್ತಿವೆ. ಅನೇಕ ಶಾಲೆಗಳು ಬೀಳುವ ಹಂತದಲ್ಲಿವೆ. 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯವಿಲ್ಲ. ಸಾವಿರಾರು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅನೇಕ ಶಾಲೆಗಳಿಗೆ ಮೈದಾನ ಹಾಗೂ ಕಾಂಪೌಂಡ್ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಸೌಲಭ್ಯ ಒದಗಿಸಿದರೆ, ಖಂಡಿತವಾಗಿಯೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚುತ್ತದೆ ಎಂದು ಎಐಡಿಎಸ್ಓ ಸದಸ್ಯರು ತಿಳಿಸಿದರು.ಸರ್ಕಾರವು ತನ್ನ ಜವಾಬ್ದಾರಿ ನಿರ್ವಹಿಸುವುದನ್ನು ಬಿಟ್ಟು, ಶಾಲೆಗೆ ಮಕ್ಕಳನ್ನು ಸೇರಿಸುತ್ತಿಲ್ಲವೆಂದು ಪಾಲಕರ ಮೇಲೆ ಗೂಬೆ ಕೂರಿಸುತ್ತಿದೆ. ಇದು ಖಂಡನೀಯ. ಮಕ್ಕಳ ಕಡಿಮೆ ಸಂಖ್ಯೆಯ ನೆಪ ಹೇಳಿ, ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಕೊನೆಗಾಣಿಸಿ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಹುನ್ನಾರವಿದು. ಈಗಾಗಲೇ, ಶಿಕ್ಷಣದ ವೆಚ್ಚಗಳು ಗಗನಕ್ಕೇರಿದ್ದು, ಖಾಸಗಿ ಸಂಸ್ಥೆಗಳ ಲಾಭವನ್ನು ಇನ್ನಷ್ಟು ಅಧಿಕಗೊಳಿಸಲು ಇದು ರಹದಾರಿಯಾಗಿದೆ. ತಾವು ಬಡವರ ಪರ ಎಂದು ಕೊಚ್ಚಿಕೊಳ್ಳುವ ಕರ್ನಾಟಕ ಸರ್ಕಾರದ ಕಡು ಜನವಿರೋಧಿ ನೀತಿಯಿದಾಗಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಸರ್ಕಾರವು ತನ್ನ ನಿಲುವನ್ನು ಬದಲಾಯಿಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಖಾಲಿ ಇರುವ ಎಲ್ಲ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಬೇಕು. ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ, ಈಗಾಗಲೇ ರಾಜ್ಯದ ಹಳ್ಳಿ ಹಳ್ಳಿಗಳಿಗೆ ಹೋಗಿ ಜನರನ್ನು ಸಂಘಟಿಸಿ ಎಐಡಿಎಸ್ಓ ಹೋರಾಟವನ್ನು ಸಂಘಟಿಸುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಈ ಮೂಲಕ ಸರ್ಕಾರವನ್ನು ಎಚ್ಚರಿಸುತ್ತದೆ.ಇಂದಿನ ಸಹಿಸಂಗ್ರಹ ಅಭಿಯಾನದ ನೇತೃತ್ವವವನ್ನು ಎಐಡಿಎಸ್ಓ ಬೆಳಗಾವಿ ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಿಳೂರ ವಹಿಸಿದ್ದರು. ಕಾರ್ಯಕರ್ತರಾದ ಹಣಮೇಶ್, ಶಿವಾನಂದ ಜೀವನ್ ಮುಂತಾದವರು ಭಾಗವಹಿಸಿ ಸಹಿಸಂಗ್ರಹಿಸಿದರು. ಜನರು ವಿದ್ಯಾರ್ಥಿಗಳ ಈ ಹೋರಾಟವನ್ನು ಬೆಂಬಲಿಸಿ ತಮ್ಮ ಸಹಿಗಳನ್ನು ನೀಡಿದರು.