ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಹಳೆ ಹಂಪಾಪುರ ಬಳಿ ಇರುವ ರೇಷ್ಮೆ ಇಲಾಖೆಯ ಹಳೆ ಕಟ್ಟಡದ 13 ಎಕರೆ, 18 ಗುಂಟೆ ಪ್ರದೇಶದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಅವರು ಉತ್ಸುಕರಾಗಿದ್ದು ವಿಜ್ಞಾನಿಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಂತೆಯೇ ಶೀಘ್ರ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಅವರು ಹಂಪಾಪುರದ ಹಳೆ ರೇಷ್ಮೆ ಇಲಾಖೆಯ ಕಾರ್ಖಾನೆ ಸ್ಥಳದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಸಂಬಂಧ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡದ ಜೊತೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಸಿಲ್ಕ್ ಪಾರ್ಕ್ ನಿರ್ಮಾಣವಾದರೆ ನೂಲು ಬಿಚ್ಚಣಿಕೆದಾರರಿಗೆ ಒಳ್ಳೆಯದಾಗಲಿದೆ. ರೇಷ್ಮೆ ಕೃಷಿ ಹಾಗೂ ಕೆಲಸ ಕಾರ್ಯ ನಂಬಿ ಬೆಂಗಳೂರಿಗೆ ವಲಸೆ ಹೋಗಿರುವ ಕಾರ್ಮಿಕರು ಸಹ ಮತ್ತೆ ಉದ್ಯೋಗ ಅರಸಿ ಬರುವ ಸಾಧ್ಯತೆ ಮನಗಂಡು ಸರ್ಕಾರದ ಗಮನ ಸೆಳೆದಿದ್ದೆ. ಈ ಹಿನ್ನೆಲೆ ಪರಿಶೀಲನೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿರುವುದು ಸಂತಸದ ವಿಚಾರ ಎಂದರು.

ಈಗಾಗಲೇ ಸರ್ಕಾರ ಸಿಲ್ಕ್ ಪಾರ್ಕ್ ನಿರ್ಮಾಣಕ್ಕೆ ಮೈಸೂರಿನ ತಾಂಡವಪುರ, ಶಿಡ್ಲಘಟ್ಟ, ರಾಮನಗರ, ಹಾವೇರಿ, ಗುಲ್ಬರ್ಗದಲ್ಲಿ ಅನುಮತಿ ನೀಡಿತ್ತು, ಇದನ್ನು ಮನಗಂಡು ನಾನು ಸದನದಲ್ಲಿ ನಮ್ಮ ಹಳೇ ಮೈಸೂರು ಭಾಗ ರೇಷ್ಮೆಗೆ ಹೆಸರುವಾಸಿಯಾಗಿರುವ ಭಾಗವಾದ್ದರಿಂದ ಇಲ್ಲಿಗೂ ಸಿಲ್ಕ್ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಇತ್ತೀಚೆಗೆ ಸರ್ಕಾರದ ಗಮನ ಸೆಳೆದಿದ್ದೆ. ಈ ಭಾಗದಲ್ಲಿ ಸರ್ಕಾರಿ ಐಟಿಐ, ಆದರ್ಶ ಶಾಲೆಗೂ ಸಹ ರೇಷ್ಮೆ ಇಲಾಖೆ ಜಾಗ ನೀಡಿದ್ದು, ಉಳಿದ ಹಳೆಯ ಕಟ್ಟಡ ಹೊಂದಿರುವ 13 ಎಕರೆ, 18 ಗುಂಟೆ ಹಳೆ ಕಾರ್ಖಾನೆಯ 14 ಕಟ್ಟಡ ಕೆಡವಿ ಪಾರ್ಕ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಭರವಸೆ ಇದೆ ಎಂದರು.

ಸಂತೇಮರಳ್ಳಿಯ ಫಿಲೇಚರ್ಸ್ ನ ಕಾಯಕಲ್ಪಕ್ಕೂ ಸಹ ಸರ್ಕಾರ ಈಗಾಗಲೇ ₹15 ಕೋಟಿ ನೀಡಿದೆ. ಇದು ಬಿಡುಗಡೆಯಾಗಿ


ವರ್ಷವಾಗಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಕಾರ್ಯಕ್ರಮ ರೂಪಿಸಲು ಮುಂದಾಗಿರಲಿಲ್ಲ, ಈ ಹಿನ್ನೆಲೆ ಸಚಿವರಾದ ವೆಂಕಟೇಶ್ ಅವರ ಗಮನಕ್ಕೆ ತರುತ್ತಿದ್ದಂತೆ ಇದರ ಕಾಯಕಲ್ಪ ಹಾಗೂ ಸಿಲ್ಕ್ ಪಾರ್ಕ್ ನಿರ್ಮಾಣ ಸ್ಥಳ ಪರಿಶೀಲನೆ ಹಾಗೂ ಪೈಲೆಟ್ ಪ್ರಾಜೆಕ್ಟ್ ತಯಾರಿಕೆಗೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ನೇಮಿಸಿದೆ, ಈ ಹಿಂದೆ ಚಾ.ನಗರ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರೇ ಈಗ ರೇಷ್ಮೆ ಇಲಾಖೆ ಆಯುಕ್ತರಾಗಿರುವುದರಿಂದ ಸಿಲ್ಕ್ ಪಾರ್ಕ್ ನಿರ್ಮಾಣ ಹಾಗೂ ₹15 ಕೋಟಿ ಅನುದಾನಕ್ಕೆ ಕಾಯಕಲ್ಪ ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ವೇಳೆ ಅಧಿಕಾರಿಗಳಾದ ಪುಟ್ಟಸ್ವಾಮಿ ಗೌಡ, ರಾಚಪ್ಪ, ವೆಂಕಟೇಶ್, ವಿಜ್ಞಾನಿಗಳಾದ ಡಾ.ಶ್ರೀನಿವಾಸ್, ಮಹದೇವಯ್ಯ,

ರವಿಕುಮಾರ್ ಇನ್ನಿತರರಿದ್ದರು.