ಅದ್ಧೂರಿಯಾಗಿ ನಡೆದ ಬೆಳ್ಳಿ ರಥೋತ್ಸವ

| Published : Mar 14 2025, 12:34 AM IST

ಅದ್ಧೂರಿಯಾಗಿ ನಡೆದ ಬೆಳ್ಳಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರವಾದ ಶ್ರೀ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮೀಯವರ ಬೆಳ್ಳಿ ರಥೋತ್ಸವವು ಗುರುವಾರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರವಾದ ಶ್ರೀ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮೀಯವರ ಬೆಳ್ಳಿ ರಥೋತ್ಸವವು ಗುರುವಾರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮಿಯವರ ಬೆಳ್ಳಿ ರಥೋತ್ಸವವು ವಿವಿಧ ಜಾನಪದ ಕಲಾತಂಡಗಳಾದ ನಂದಿಧ್ವಜ, ಕಹಳೆ, ವಿವಿಧ ರೀತಿಯ ವಾಧ್ಯವೃಂದ ಸೇರಿದಂತೆ ಪ್ರಸಿದ್ಧ ವೀರಗಾಸೆ, ವೀರಭದ್ರ ಕುಣಿತಗಳೊಂದಿಗೆ ಆಕರ್ಶಕವಾಗಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ರಥೋತ್ಸವದ ನಂತರ ಶ್ರೀಗಳವರು ಪತ್ರಿಕೆಯೊಂದಿಗೆ ಮಾತನಾಡಿ, ಜಾತ್ರೆಗಳು ಧಾರ್ಮಿಕ ಸಂಬಂಧಗಳ ಜೊತೆ ಮನೆಮನೆ ಹಾಗೂ ಮನಸ್ಸುಗಳ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇಂದು ಮನುಷ್ಯನಿಗೆ ಏನೇ ಲಭಿಸಿದ್ದರೂ ಮನಃಶಾಂತಿಗೋಸ್ಕರ ದೇವರು, ದೇವಸ್ಥಾನ ಹಾಗೂ ಪೂಜೆ ಪುನಸ್ಕಾರಗಳ ಜೊತೆ ಜಾತ್ರೆ, ದೇವರ ಕೆಲಸಕಾರ್ಯಗಳು ಹೆಚ್ಚಿನ ನೆಮ್ಮದಿ ನೀಡುತ್ತಿರುವುದರಿಂದ ಹೆಚ್ಚಿನ ಜನರು ಜಾತ್ರೆಗಳಿಗೆ ಸೇರುತ್ತಿದ್ದು ರಥೋತ್ಸವಕ್ಕೆ ಮೆರುಗು ನೀಡಿದ್ದು ಕ್ಷೇತ್ರಾಧಿಪತಿಗಳಾದ ಶ್ರೀ ಶಂಕರೇಶ್ವರ-ಶ್ರೀ ರಂಗ ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ. ಕಲ್ಪತರು ನಾಡಿನಲ್ಲಿ ನೀರಿಗಾಗಿ ತೀವ್ರ ತೊಂದರೆಯಾಗುತ್ತಿದ್ದು, ಪ್ರಾಣಿ ಹಾಗೂ ಸಸ್ಯ ಸಂಕುಲಗಳು ವಿನಾಶದಂಚಿಗೆ ತಲುಪುತ್ತಿವೆ. ರೈತರ ಬದುಕು ಸಹ ಸಂಕಷ್ಟದಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಪ್ರಕೃತಿ ಮಾತೆ ಹಾಗೂ ಶ್ರೀಕ್ಷೇತ್ರದ ಆರಾಧ್ಯ ದೈವರಾದ ಶ್ರೀಶಂಕರೇಶ್ವರ ಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಯವರ ಕೃಪೆಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಉತ್ತಮ ಮಳೆ-ಬೆಳೆಯಾಗಿ ಸದ್ಯದ ಆತಂಕ ದಿನಗಳು ದೂರವಾಗಲಿ. ಭವಿಷ್ಯದ ದಿನಗಳು ರೈತರಿಗೆ ಆಶಾದಾಯಕ ದಿನಗಳಾಗಲಿವೆ ಎಂದು ಶ್ರೀಗಳು ಶುಭ ಹಾರೈಸಿದರು.