ಸಾಗುವಳಿ ಚೀಟಿ ನೀಡಲು ಪ್ರಾಮಾಣಿಕ ಪ್ರಯತ್ನ: ಶಾಸಕ ಇಕ್ಬಾಲ್ ಹುಸೇನ್

| Published : Oct 04 2024, 01:03 AM IST

ಸಾಗುವಳಿ ಚೀಟಿ ನೀಡಲು ಪ್ರಾಮಾಣಿಕ ಪ್ರಯತ್ನ: ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅಧಿಕೃತ ಸಾಗುವಳಿ ಚೀಟಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಇಕ್ಬಾಲ್‌ಹುಸೇನ್ ತಿಳಿಸಿದರು. ಹಾರೋಹಳ್ಳಿಯ ಬಳೆಚನ್ನವಲಸೆ ಗ್ರಾಮದಲ್ಲಿ ಮಾತನಾಡಿದರು.

ಬಗರ್‌ಹುಕುಂ ಅರ್ಜಿಗಳ ಸ್ಥಳ ಪರಿಶೀಲನೆಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅಧಿಕೃತ ಸಾಗುವಳಿ ಚೀಟಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಇಕ್ಬಾಲ್‌ಹುಸೇನ್ ತಿಳಿಸಿದರು.

ತಾಲೂಕಿನ ಬಳೆಚನ್ನವಲಸೆ ಗ್ರಾಮದಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಕಾಲ ಸಚಿವರಾಗಿದ್ದ ಪಿಜಿಆರ್ ಸಿಂಧ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಂತಹ ಪ್ರಬಲ ನಾಯಕರು ಸಾಗುವಳಿ ಚೀಟಿ ನೀಡಲು ಒತ್ತು ನೀಡಿರಲಿಲ್ಲ. ಅರ್ಹ ಫಲಾನುಭವಿಗಳನ್ನು ಗುರ್ತಿಸಲು ರೈತರ ಮನೆ ಹಾಗೂ ಜಮೀನಿನ ಬಳಿ ಹೋಗಿ ಅನುಕೂಲ ಮಾಡಿಕೊಡಲು ಕ್ರಮಕೈಗೊಳ್ಳಲಾಗುತ್ತಿದೆ. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಮತದಾರರಿಗೆ ಯಾವುದೇ ವಂಚನೆ ಮಾಡದೇ ಪಕ್ಷಭೇದ ಮರೆತು ಬಗರ್‌ಹುಕುಂ ಸಾಗುವಳಿ ಚೀಟಿ ನೀಡಲು ಮುಂದಾಗಿದ್ದೇವೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಮುಂದಿನ ದಿನದಲ್ಲಿ ನೀರು ಹಾಗೂ ಮೇವಿನ ಕೊರತೆಯಾದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಬರಗಾಲದ ಅರಿವು ನನಗೂ ಇರುವುದರಿಂದ ಈಗಾಗಲೇ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾರೋಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಮನವಿ ಮಾಡಲಾಗಿದೆ. ಮೇವಿನ ಕೊರತೆ ಉಂಟಾದರೆ ಪ್ರತಿ ಹೋಬಳಿಗಳಲ್ಲಿ ಗೋಶಾಲೆ ತೆರೆದು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಟಿ.ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ದೊಡ್ಡಮರಳವಾಡಿ ಗ್ರಾ.ಪಂ ವ್ಯಾಪ್ತಿಯ ಸಿಡಿದೇವರಹಳ್ಳಿಯ ಮುನೇಶ್ವರಸ್ವಾಮಿ ದೇವಾಲಯ ಬಳಿ 40 ಲಕ್ಷ ರು. ವೆಚ್ಚದಲ್ಲಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಗುದ್ದಲಿಪೂಜೆ, ಟಿ.ಹೊಸಹಳ್ಳಿ, ಬಳೆಚನ್ನವಲಸೆ, ಪಡುವಣಗೆರೆ, ಪುರದೊಡ್ಡಿ ಗ್ರಾಮಗಳಲ್ಲಿ ಬಗರ್‌ಹುಕುಂ ಅರ್ಜಿಗಳ ಸ್ಥಳ ಪರಿಶೀಲನೆ ಮಾಡಲಾಯಿತು.

ತಹಸೀಲ್ದಾರ್ ಶಿವಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ್, ಬಮುಲ್ ನಿರ್ದೇಶಕ ಹೆಚ್.ಎಸ್.ಹರೀಶ್‌ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯ ಭುಜಂಗಯ್ಯ, ಕೀರಣಗೆರೆ ಜಗದೀಶ್, ಸೋಮಶೇಖರ್, ಬಾಲಾಜಿ, ಯುವಕಾಂಗ್ರೆಸ್‌ನ ಸೊಂಟೇನಹಳ್ಳಿ ದಿನೇಶ್, ಹೊಂಬಾಳೇಗೌಡ, ಪುರದೊಡ್ಡಿ ಕೆಂಪೇಗೌಡ, ದುರ್ಗೇಗೌಡ, ರಾಯಲ್‌ರಾಮಣ್ಣ, ಯಲಚವಾಡಿ ರಾಮಕೃಷ್ಣ, ಚಂದ್ರು, ಅರುಣ್‌ಕುಮಾರ್, ರಾಜು ಹಾಜರಿದ್ದರು.