ಸಾರಾಂಶ
ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ವೀರಭದ್ರ ಬಾಬುರವರನ್ನು ಅಭಿನಂದಿಸಲಾಯಿತು.
ವೀರದಿಮ್ಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ:
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಪ್ರತಿಷ್ಠೆಯ ಚುನಾವಣಾ ಕಣವಾಗಿ ಎಲ್ಲರ ಗಮನ ಸೆಳೆದಿದ್ದ ವೀರದಿಮ್ಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಫೆ.17ರಂದು ಸೋಮವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, 3ನೇ ಬಾರಿಗೆ ಅವಿರೋಧವಾಗಿ ಸಿ.ವೀರಭದ್ರಬಾಬು ಅಧ್ಯಕ್ಷರಾಗಿ ಹ್ಯಾಟ್ರಿಕ್ ವಿಜಯ ದಾಖಲಿಸಿದ್ದಾರೆ.ವೀರದಿಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ಸ್ಥಾನಗಳಿಗೆ ಜ.12ರ ಭಾನುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಗೊಂದಲ ಉಂಟಾಗಿತ್ತು. ಫೆ.17 ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಸೈಯದ್ ಪರ್ವಿದ್ ತಿಳಿಸಿದ್ದರು. ಅದರಂತೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.ಉಪಾಧ್ಯಕ್ಷರಾಗಿ ತ್ಯಾಗರಾಜನಗರದ ಜಯಮ್ಮ, ನಿರ್ದೇಶಕರಾಗಿ ಚಿತ್ರಯ್ಯನಹಟ್ಟಿ ಬಿ.ರಂಗಣ್ಣ, ಪಾಪಣ್ಣ, ಬುಡ್ನಹಟ್ಟಿಯ ಸಣ್ಣಸೂರಯ್ಯ, ಬಿ.ತಿಪ್ಪಯ್ಯ, ವೀರದಿಮ್ಮನಹಳ್ಳಿ ವಿ.ಎನ್.ರಾಮಾನಾಯ್ಕ, ಸಹಕಾರಿ ಕ್ಷೇತ್ರದ ಸತೀಶ್ರೆಡ್ಡಿ ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಬೆಂಬಲ ಘೋಷಿಸಿದ್ದಾರೆ.
ನೂತನ ಅಧ್ಯಕ್ಷ ಸಿ.ವೀರಭದ್ರಬಾಬು ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ಸ್ಥಿತಿಯಲ್ಲಿ ಸಹಕಾರ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯಾವುದೇ ಸಹಕಾರ ಕ್ಷೇತ್ರವಿರಲಿ ಶೇರುದಾರರ ವಿಶ್ವಾಸವನ್ನು ಗಣಿಸುವುದು ಪ್ರಮುಖ ವಿಷಯವಾಗಿದೆ. ಪ್ರಸ್ತುತ ಈ ವರ್ಷ ನಡೆದ ಚುನಾವಣೆಯಲ್ಲಿ ಭಾರಿ ವಿರೋಧದ ನಡುವೆಯೂ ಗೆಲುವು ಸಾಧಿಸಿದ್ದಲ್ಲದೆ, ಅಧ್ಯಕ್ಷ ಸ್ಥಾನವನ್ನೂ ಮತ್ತೆ ನನಗೆ ಶೇರುದಾರರೇ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಹಕಾರಿಯ ಪ್ರಗತಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವೆ. ಈಗಾಗಲೇ ಬಹುತೇಕ ಎಲ್ಲಾ ಶೇರುದಾರರಿಗೆ ಸಹಕಾರ ಕ್ಷೇತ್ರದಿಂದ ನೀಡುವ ಸೌಲಭ್ಯವನ್ನು ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಇದು ನನ್ನ ವಿಜಯಕ್ಕೆ ಕಾರಣವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಇಂದ್ರಣ್ಣ ಸೇರಿ ಮುಂತಾದವರು ಉಪಸ್ಥಿತರಿದ್ದರು.