ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬಿ.ಎಲ್‌. ಸ್ವಾಮಿ ಸ್ವರಸಂಗಮ ಸಾಂಸ್ಕೃತಿಕ ಕಲಾ ತಂಡದ 3ನೇ ವಾರ್ಷಿಕೋತ್ಸವವು ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಬುಧವಾರ ನಡೆಯಿತು. ಉದಯೋನ್ಮಖ ಪ್ರತಿಭೆಗಳು ಸುಮಧುರ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.

ಬಸವಲಿಂಗಸ್ವಾಮಿ, ಡಾ.ರೇಖಾ ಅರುಣ್‌, ಗುರುರಾಜ್‌, ಹಿತೈಷಿ ನಾಗಶ್ರೀ, ಪ್ರೇಮ್‌ ನಾದಮಯ. ಸಿ. ತನುಜಾ, ಮಂಜುನಾಥಮೂರ್ತಿ, ಜಾಯ್ಸ್‌ ಪೀಟರ್‌, ತೇಜಾವತಿ ಹಾಡಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಸುಗಮ ಸಂಗೀತ ಮೈಸೂರು ಘಟಕದ ಅಧ್ಯಕ್ಷ ನಾಗರಾಜ ಬೈರಿ ಅಧ್ಯಕ್ಷತೆ ವಹಿಸಿದ್ದರು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಮಾಜ ಸೇವಕ ಕೆ. ರಘರಾಂ ವಾಜಪೇಯಿ, ಡಾ. ರೇಖಾ ಅರುಣ್‌, ಪ್ರಭಾಶಾಸ್ತ್ರಿ ಜೋಸ್ಯುಲ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಆಯೋಜಕ ಬಸವಲಿಂಗಸ್ವಾಮಿ ಇದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಸ್ವಾಮಿ, ಕಲಾಪೋಷಕ ಅಭಯ್‌ ಕುಮಾರ್‌, ಕವಿ ಉಷಾರಾಣಿ, ರಂಗಕರ್ಮಿ ಮಂಡ್ಯ ರಮೇಶ್‌ ಅವರ ಸಹೋದರರಾದ ಆನಂದ್‌, ಜನಚೈತನ್ಯ ಫೌಂಡೇಷನ್‌ ಅಧ್ಯಕ್ಷ ಆರ್‌. ಲಕ್ಷ್ಮಣ್‌ ಅವರನ್ನು ಸನ್ಮಾನಿಸಲಾಯಿತು.ಒಗ್ಗಟಿನ ಹೋರಾಟದಿಂದ ಸಂಗೀತ ಕಾರ್ಯಕ್ರಮಗಳು ಹೆಚ್ಚಳ; ನಾಗರಾಜ ವಿ. ಬೈರಿ


ಒಂದು ವರ್ಷದ ಹಿಂದೆ ಇದೇ ದಿನ ಐಪಿಆರ್‌ಎಸ್‌ (ಬೌದ್ಧಿಕ ಹಕ್ಕು ಸ್ವಾಮ್ಯ) ಕಿರುಕುಳದ ವಿರುದ್ಧ ನಗರದ ಎಲ್ಲಾ ಸಂಗೀತ ಸಂಸ್ಥೆಗಳು ಒಗ್ಗಟ್ಟಿನಿಂದ ನಡೆಸಿದ ಹೋರಾಟ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೊಂಡ ದಿಟ್ಟ ಕ್ರಮಗಳಿಂದ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿವೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಹೇಳಿದರು.

ಯಾವುದೇ ಸಭಾಂಗಣದಲ್ಲಿ ಚಲನಚಿತ್ರ ಮತ್ತಿತರ ಹಾಡುಗಳನ್ನು ಹಾಡಬೇಕಾದರೆ ನಮ್ಮ ಸಂಸ್ಥೆಗೆ 15 ಸಾವಿರ ರು. ಪಾವತಿಸಬೇಕು ಎಂದು ಐಪಿಆರ್‌ಎಸ್‌ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ನಾದಬ್ರಹ್ಮಸಭಾದಲ್ಲಿ ಒಂದು ತಿಂಗಳು ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಇದರ ವಿರುದ್ಧ ಎಲ್ಲರೂ ಸೇರಿ ಹೋರಾಟ ಮಾಡಿದ್ದರ ಫಲವಾಗಿ ವರ್ಷವಿಡಿ ಕಾರ್ಯಕ್ರಮಗಳು ನಡೆಯುವಂತಾಗಿದೆ. ನಗರದ ಕಲಾಪೋಷಕರು ಅದೇ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಪೂರ್ವಸೂರಿಗಳನ್ನು ಸ್ಮರಣೆ ಮಾಡುತ್ತಲೇ ಮುಂದೆ ಸಾಗಬೇಕಿದೆ. ಇವತ್ತು ಡಾ.ರಾಜ್‌ಕುಮಾರ್‌ ಸೇರಿದಂತೆ ಹಲವಾರು ಮಂದಿ ಇಲ್ಲ. ಆದರೆ ಅವರ ಧ್ವನಿ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರು ಸದಾ ಜನಮಾನಸದಲ್ಲಿ ಇರುತ್ತಾರೆ ಎಂದರು.