ಸಾರಾಂಶ
ಕುಂದಗೋಳ: ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಕಲ್ಪಿಸಬೇಕು ಎಂದು ಸಮಾಜದ ಮುಖಂಡರು ತಹಸೀಲ್ದಾರ್ಗೆ ಮನವಿ ಮಾಡಿಕೊಂಡರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರು ಮನವಿ ಮಾಡಿದರು.ಹಲವು ವರ್ಷಗಳಿಂದ ಸಮುದಾಯ ಭವನದ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅ. 7ರಂದು ನಡೆಯುವ ಜಯಂತಿಯೊಳಗೆ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಜಯಂತಿ ದಿನದಂದು ಪ್ರತಿ ಅಂಗನವಾಡಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಯಿಟ್ಟು ಆಚರಿಸುವಂತೆ ಮನವಿ ಮಾಡಿದರು.ತಾಪಂ ಇಒ ಜಗದೀಶ್ ಕಮ್ಮಾರ ಮಾತನಾಡಿ, ಗ್ರಾಪಂ ಮೂಲಕ ಪ್ರತಿ ಅಂಗನವಾಡಿಗಳಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಒದಗಿಸಲಾಗುವುದು. ಶಾಲಾ- ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಈ ಮಹನೀಯರ ಭಾವಚಿತ್ರವಿಟ್ಟು ಜಯಂತಿ ಆಚರಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ಅಂದು ತಾಲೂಕಿನಲ್ಲಿ ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಎಸ್.ಟಿ.ಸಮಾಜದ ತಾಲೂಕಾಧ್ಯಕ್ಷ ರಾಜು ದೊಡ್ಡಶಂಕರ, ಯಾವುದೇ ವಿಷಯಗಳನ್ನು ದೊಡ್ಡದು ಮಾಡುವುದು ಬೇಡ. ನಮ್ಮ ಸಮಾಜದ ಬಗ್ಗೆ ನಮಗೇ ಗೌರವ ಇರಬೇಕು ಎಂದರು.
ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಇತಿಹಾಸವನ್ನೇ ಸೃಷ್ಟಿಸಿದ ಧೀಮಂತ ನಾಯಕರು. ಅವರ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ ಎಲ್ಲ ಸಮಾಜದವರೂ ಅವರನ್ನು ಗೌರವಿಸುವ ಹಾಗೆ ಆಗಬೇಕು ಎಂದು ಆಶಿಸಿದರು.ಬಸವರಾಜ ನಾಯ್ಕರ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ, ಸಿಪಿಐ ಶಿವಾನಂದ ಅಂಬಿಗೇರ, ಹಿಂದುಳಿದ ವರ್ಗದ ಅಧಿಕಾರಿ ಅಶೋಕ್ ಸಾವಂತ, ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜು ದೊಡ್ಡಶಂಕರ, ರವೀಂದ್ರ ದೊಡ್ಡಮನಿ, ಶಂಕ್ರಣ್ಣ ಹಿತ್ತಮನಿ, ಅಡಿವೆಪ್ಪ ಹೆಬಸೂರ, ವೀರಣ್ಣ ಗೌಡನಾಯ್ಕರ ಸೇರಿದಂತೆ ಅನೇಕರಿದ್ದರು.