ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ-ದಾಬಸ್‌ಪೇಟೆ-ಲಕ್ಕೂರು(ಮಾಕೇನಹಳ್ಳಿ ಗಡಿ) ಗ್ರಾಮದವರೆಗೆ ದ್ವಿಪಥ ರಸ್ತೆ ಅಗಲೀಕರಣ ಮಾಡಿ ಚತುಷ್ಪತ ರಸ್ತೆ ನಿರ್ಮಾಣಬೇಕೆಂದು ಶಾಸಕರ ಮನವಿ ಮೇರೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಿವಗಂಗೆಗೆ ಭೇಟಿ ನೀಡಿ ವೀಕ್ಷಿಸಿದರು.

ಶಿವಗಂಗೆಯಿಂದ ಬರಗೇನಹಳ್ಳಿ, ಹೊನ್ನೇನಹಳ್ಳಿ ಮಾರ್ಗವಾಗಿ ದಾಬಸ್‍ಪೇಟೆಯ ಉದ್ದಾನೇಶ್ವರ ವೃತ್ತದ ಬಳಿ ಟ್ರಾಫಿಕ್ ಜಾಂ ವೀಕ್ಷಿಸಿ ನಂತರ, ಬೆಂ.ಗ್ರಾ. ಜಿಲ್ಲಾ ಗಡಿ ಮಾಕೇನಹಳ್ಳಿವರೆಗೆ ಹೆದ್ದಾರಿ ವೀಕ್ಷಿಸಿದರು.

ಬಳಿಕ ಮಾತನಾಡಿದ ಸಚಿವರು, ಶಾಸಕ ಶ್ರೀನಿವಾಸ್‌ ರಸ್ತೆ ಅಗಲೀಕರಣ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ನಾನೇ ಖುದ್ದು ರಸ್ತೆ ಪರಿಶೀಲಿಸಿದ್ದೇನೆ. ದಾಬಸ್‍ಪೇಟೆ ವೇಗವಾಗಿ ಬೆಳೆಯುತ್ತಿದ್ದು ಜನವಸತಿ, ವಾಹನ ದಟ್ಟಣೆ, ರಸ್ತೆ ಅಗಲೀಕರಣದ ಬಗ್ಗೆ ಕ್ರಮ ವಹಿಸುತ್ತೇನೆ. ಶಾಸಕರ ಮನವಿಗೆ ಖಂಡಿತ ಸ್ಪಂದಿಸುತ್ತೇನೆ ಎಂದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಸಚಿವರು ಸ್ಥಳದಲ್ಲೇ ಅಧಿಕಾರಿಗಳ ಜೊತೆ ಚರ್ಚಿಸಿರುವುದು ಖುಷಿ ತಂದಿದೆ. ಇಲಾಖೆ ಅಧಿಕಾರಿಗಳು ಈ ರಸ್ತೆಯನ್ನು ಈಗಾಗಲೇ ಕೆಆರ್‌ಡಿಎಲ್‌ಗೆ ಹಸ್ತಾಂತರಿಸಿದ್ದು, ಮರು ಡಾಂಬರೀಕರಣವಾಗಿ ನಿರ್ವಹಣೆಯಾಗುತ್ತಿದೆ. ಎಸ್‌ಟಿಆರ್‌ಆರ್ ರಸ್ತೆ ನಿರ್ಮಿಸುವಾಗ ಈ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮಾಡುತ್ತೇವೆಂದು ಹೇಳಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತಪ್ಪು ಮಾಹಿತಿ ನೀಡಿದ್ದರು. ಈ ಬಗ್ಗೆ ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ ಅತ್ರೇಶ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಶಿವಕುಮಾರ್, ಉಪ ತಹಸೀಲ್ದಾರ್ ಶಶಿಧರ್, ಆರ್‌ಐ ಗಳಾದ ಸುಂದರ್ ರಾಜ್, ಮುನಿರಾಜು, ಗ್ರಾಪಂ ಸದಸ್ಯರಾದ ದಿನೇಶ್ ನಾಯ್ಕ, ಮನು ಪ್ರಸಾದ್, ಆನಂದ್, ಖಲೀಂಉಲ್ಲಾ ಇತರರಿದ್ದರು.


ಫೆÇೀಟೋ 9 : ಸೋಂಪುರ ಹೋಬಳಿಯ ಶಿವಗಂಗೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯನ್ನು ಶಾಸಕ ಶ್ರೀನಿವಾಸ್, ಅಗಳಕುಪ್ಪೆ ಗೋವಿಂದರಾಜು ಇತರರು ಸ್ವಾಗತಿಸಿದರು.