ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಈ ಯೋಜನೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ತುಂಬಾ ಅನುಕೂಲವಾಗುತ್ತದೆ. ಮೊದಲು ನರೇಗಾ ಎಂದು ಇತ್ತು. ಅದಕ್ಕೆ ಮಹಾತ್ಮ ಗಾಂಧಿ ಹೆಸರು ಜೋಡಿಸಿ ಮನ್ರೇಗಾ ಮಾಡಿದರು. ಮನ್ರೇಗಾವನ್ನು ಮೇಲ್ವಿಚಾರಣೆ ಮಾಡುವುದು ಕಷ್ಟವಿತ್ತು. ಸಾಕಷ್ಟು ಆರ್ಥಿಕ ಅವ್ಯವಹಾರ ಆಗುತ್ತಿತ್ತು. ಅಪಾರ ಪ್ರಮಾಣದ ಹಣ ಪೋಲಾಗುತಿತ್ತು. ಗ್ರಾಮೀಣ ಜನರ ಬದುಕನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮನರೇಗಾ ಇರಲಿಲ್ಲ. ಇದನ್ನೆಲ್ಲ ಮನಗಂಡು ಮನರೇಗಾವನ್ನು ಒಂದಷ್ಟು ಬದಲಾಯಿಸಲಾಗಿದೆ ಎಂದರು.ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಗ್ರಾಮೀಣ ಜನರು ಅವರ ಬದುಕನ್ನು ಅವರೇ ರೂಢಿಸಿಕೊಳ್ಳಬಹುದು. ಕಾಂಗ್ರೆಸ್ನವರು ಇದನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ. ಯೋಜನೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಗಳೇ ಕಾಮಗಾರಿಗಳನ್ನು ನಿಗದಿ ಮಾಡಬಹುದು. ಆದರೆ ಅಧಿಕಾರ ಕಿತ್ತುಕೊಳ್ಳಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆ ಕೊಡಗಿನಂತಹ ಜಿಲ್ಲೆಗೆ ಉತ್ತಮವಾಗಿದೆ ಎಂದರು.ಮಮತಾ ವಿರುದ್ಧ ಆಕ್ರೋಶ:
ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ಚುನಾವಣೆ ಇರುವುದರಿಂದ ಅಲ್ಲಿ ಲಾಭ ಪಡೆಯುವುದಕ್ಕೋಸ್ಕರ ಅಜಿತ್ ಪವಾರ್ ವಿಮಾನ ದುರಂತದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿರಬಹುದು ಎಂದರು.ಆಧಾರಗಳ ಮೇಲೆ ತನಿಖೆ
ಎಲ್ಲ ದುರಂತಗಳು ಆದಾಗ ಸಂಪೂರ್ಣ ತನಿಖೆ ಆಗಿವೆ ಬ್ಲ್ಯಾಕ್ ಬಾಕ್ಸ್ ಸೇರಿದಂತೆ ವಿವಿಧ ಆಧಾರಗಳನ್ನು ತನಿಖೆ ಮಾಡಲಾಗುತ್ತದೆ. ಪುಲ್ವಾಮಾ ದಾಳಿ ಮತ್ತು ಸೇನಾಧಿಕಾರಿ ಬಿಪಿನ್ ರಾವತ್ ಸಾವಿನ ಬಗ್ಗೆಯೂ ತನಿಖೆ ಮಾಡಲಾಗಿದೆ. ಆದರೆ ಅವು ಸೇನೆಯ ವಿಷಯಗಳಾಗಿದ್ದರಿಂದ ಯಾವುವನ್ನೂ ಬಹಿರಂಗಗೊಳಿಸಿಲ್ಲ. ಬಿಪಿನ್ ರಾವತ್ ಅವರ ಘಟನೆಯಲ್ಲಿ ಮಂಜು ಇತ್ತು. ಅದೆಲ್ಲವೂ ಬಹಿರಂಗವಾಗಿದೆ. ಇಷ್ಟೆಲ್ಲಾ ಆದರೂ ಮಮತಾ ಬ್ಯಾನರ್ಜಿ ಯಾಕೆ ಇಂತಹ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಮಾತನಾಡಿ ವಿ.ಬಿ ಜಿ ರಾಮ್ ಜಿ ಕಾಯಿದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಮೂರು ಹಂತದಲ್ಲಿ ಕಾರ್ಯಕ್ರಮ ರೂಪಿಸಿದೆ. ನಾವು ನೇರವಾಗಿ ಜನರ ಬಳಿಯೇ ಹೋಗುತ್ತಿದ್ದೇವೆ. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕೊಡಗು ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳಲ್ಲಿ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸ್ವಾಗತಿಸಲಾಗಿದೆ. ಹೆಚ್ಚಿನ ಗ್ರಾ.ಪಂ.ಗಳಲ್ಲಿ ಯೋಜನೆ ಪರವಾಗಿ ನಿರ್ಣಯ ಆಗಿದೆ ಎಂದರು. ಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ನಗರಾಧ್ಯಕ್ಷ ಉಮೇಶ್ ಸುಬ್ರಹ್ಮಣಿ ಇದ್ದರು.