ಗದಗ: ಸ್ಲಂ ಜನಾಂದೋಲನ ರಾಜ್ಯ ಪ್ರತಿನಿಧಿಗಳ ಸಮ್ಮೇಳನ ಜೂ. 20ರಂದು ಬೆಳಗ್ಗೆ 10.30ಕ್ಕೆ ನಗರದ ಲಯನ್ಸ್ ಭವನ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಪ್ರಭು ಮಹಾಂತ ಸ್ವಾಮೀಜಿ ನೆರವೇರಿಸುವರು ಎಂದು ಸ್ಲಂ ಜನಾಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೆ ಸಾವಿತ್ರಿಬಾಯಿ ಫುಲೆ ಮಹಿಳಾ ಸಮಿತಿ ರಾಜ್ಯ ಸಂಚಾಲಕರಾದ ಮಾತೆ ಚಂದ್ರಮ್ಮ ವಹಿಸುವರು. ಪ್ರಾಸ್ತಾವಿಕವಾಗಿ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡುವರು ಎಂದರು.ಹೋರಾಟ ಕುರಿತು ಸಾಹಿತಿ ಬಸವರಾಜ ಸುಳಿಬಾವಿ ಮಾತನಾಡಲಿದ್ದು, ಸಮ್ಮೇಳನದ ರ್ಯಾಲಿ ಉದ್ಘಾಟನೆಯನ್ನು ಸಾಮಾಜಿಕ ಹೋರಾಟಗಾರ ಚೇತನ ಅಹಿಂಸಾ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಪೂರ್ಣ ರವಿಶಂಕರ, ಎಂ.ಎಸ್. ಹಡಪದ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ, ಪ್ರಗತಿಪರ ಚಿಂತಕ ಸತೀಶ ಪಾಸಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದರೂ ಸ್ಲಂ ಜನರ ಬೇಡಿಕೆ ಈಡೇರಿಸಿಲ್ಲ. ಸ್ಲಂ ಜನರಿಗೆ ಉಚಿತ ಮನೆ ನೀಡುತ್ತೇವೆ ಎಂದು ಈಗಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಹೇಳಿಕೆ ನೀಡಿತ್ತು. ಆದರೆ, ಮಾತು ತಪ್ಪಿ ಸ್ಲಂ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಪಂಚ ಗ್ಯಾರಂಟಿ ಜೊತೆಗೆ ಹಲವಾರು ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಆದರೆ, ಇನ್ನುಳಿದ ಭರವಸೆಯನ್ನು ಈಡೆರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಈ ವೇಳೆ ವಿಶಾಲಾಕ್ಷಿ ಹಿರೇಗೌಡ್ರ, ವೆಂಕಮ್ಮ ಹೊಸಪೇಟೆ, ವೆಂಗಮ್ಮ ದೊಡ್ಡಮನಿ, ಆರಾಧನಾ ಬಣಕಾರ, ಫರ್ಮಿನಬಾನು ಹವಾಲ್ದಾರ, ಮೆಹಬೂಬಸಾಬ್ ಬಳ್ಳಾರಿ, ಫಕ್ರುಸಾಬ್ ಮುಲ್ಲಾನವರ, ಶರಣಪ್ಪ ಸೂಡಿ, ಇಮ್ರಾಹಿಂ ಮುಲ್ಲಾ, ಅಕ್ಬರಬಾಷಾ ಡಂಬಳ, ಮೌಲಾಸಾಬ್ ಗಚ್ಚಿ, ಮಹಮ್ಮದ್ ಗಡಾದ ಉಪಸ್ಥಿತರಿದ್ದರು.21ರಂದು ಬಿಡದಿ ಟೌನ್ಶಿಪ್ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪಾದಯಾತ್ರೆ
ಗದಗ: ರಾಜ್ಯ ಸರ್ಕಾರ ಬಿಡದಿ ಟನ್ಶಿಪ್ ಭೂಸ್ವಾಧೀನ ಮಾಡಲು ಹೊರಟಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಜೂ. 21ರಂದು ಬೃಹತ್ ಪಾದಯಾತ್ರೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಗದಗದಿಂದ 200ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಅಂಚಿಪುರದಿಂದ ಹೊಸೂರಿನ ವರೆಗೂ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ತಾನು ಮಾಡುವ ಕಾರ್ಯಗಳಿಂದ ಸಾಮಾನ್ಯ ಜನರಿಗೆ ಉಪಯೋಗ ಆಗಬೇಕು. ಲಾಭದ ಉದ್ದೇಶದಿಂದ ಸರ್ಕಾರ ಯಾವುದೇ ಕಾರ್ಯ ಮಾಡಬಾರದು ಎಂದರು.ಬಿಡದಿಯಲ್ಲಿ ಸುಮಾರು 514 ರೈತರು ಭೂಮಿ ಹೊಂದಿದ್ದು, ಟೌನ್ ಶಿಪ್ ಮಾಡಲು 400ಕ್ಕೂ ಹೆಚ್ಚು ರೈತರು ವಿರೋಧ ಮಾಡಿದ್ದಾರೆ. ಆದರೂ, ರಾಜ್ಯ ಸರ್ಕಾರ ಬಂಡತನ ಮಾಡಲು ಹೊರಟಿದ್ದು ಸರಿಯಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಿಎಂ ಆದಾಗಿನಿಂದ ಯಾವುದೇ ಕೆಲಸ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ಬಿಡದಿ ಗೊಂದಲ ಸೃಷ್ಟಿಸಿದ್ದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಫುಲ್ ಪುಣೇಕರ, ಬಸವರಾಜ ಅಪ್ಪಣ್ಣನವರ, ಜಿ.ಕೆ. ಕೊಳ್ಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
