ದೊಡ್ಡ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗಿದಂತೆ ಮ್ಯಾಗ್ನೆಟ್ ಶಾಲೆಗಳು ಸಣ್ಣ ಸಣ್ಣ ಸರ್ಕಾರಿ ಶಾಲೆಗಳನ್ನೆಲ್ಲಾ ನುಂಗಲಿಕ್ಕಾಗಿ ತರಲು ಹೊರಟಿರುವ ವ್ಯವಸ್ಥೆಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ರಾಜಪ್ಪ ದಳವಾಯಿ ಆತಂಕ ವ್ಯಕ್ತಪಡಿಸಿದರು. ಓದಿನಿಂದಲೇ ನಿಜವಾದ ಖುಷಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಒಳ್ಳೆಯ ಗುರುಗಳಾಗಿ ಗೆಲ್ಲಬೇಕೇ ಹೊರತು, ಜಾತಿ, ಶ್ರೀಮಂತಿಕೆ, ಕಾರು,ಬಂಗಲೆಗಳ ಮೂಲಕ ಉತ್ತಮ ಶಿಕ್ಷಣ ಸಾಧ್ಯವಿಲ್ಲ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ದೊಡ್ಡ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗಿದಂತೆ ಮ್ಯಾಗ್ನೆಟ್ ಶಾಲೆಗಳು ಸಣ್ಣ ಸಣ್ಣ ಸರ್ಕಾರಿ ಶಾಲೆಗಳನ್ನೆಲ್ಲಾ ನುಂಗಲಿಕ್ಕಾಗಿ ತರಲು ಹೊರಟಿರುವ ವ್ಯವಸ್ಥೆಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ರಾಜಪ್ಪ ದಳವಾಯಿ ಆತಂಕ ವ್ಯಕ್ತಪಡಿಸಿದರು.ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಡಾ. ಆರ್. ಓಬಳೇಶ ಘಟ್ಟಿಯವರ ನಾಲ್ಕು ಬೃಹತ್ ಕೃತಿಗಳ ಲೋಕಾರ್ಪಣೆ ಹಾಗೂ ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟದ ವತಿಯಿಂದ ಅಭಿನಂದನಾ ಗ್ರಂಥ ಬಿಡುಗಡೆಯಲ್ಲಿ ೨ನೇ ಸಂಪುಟವಾದ ಭಾಷೆ, ಕನ್ನಡ ಸಾಹಿತ್ಯದ ಸಂಪದ ಮತ್ತು ಕನ್ನಡ ಭಾಷಾ ಬೋಧನೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣವೇ ಮೊದಲ ಅಸ್ತ್ರ. ಅದರಲ್ಲೂ ಹೆಣ್ಣು ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡುವುದು ಸಮಾಜದ ಪ್ರಗತಿಗೆ ಅನಿವಾರ್ಯ. ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸದೆ, ಈಗಲೇ ಓದಿಗೆ ಕಳುಹಿಸಬೇಕು ಎಂದು ಕಿವಿಮಾತು ಹೇಳಿದರು. ಓದುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಓದು ಒಂದು ತಪಸ್ಸಿನಂತೆ; ಅದಕ್ಕೆ ಏಕಾಗ್ರತೆ, ಗುರಿ ಹಾಗೂ ಛಲ ಅಗತ್ಯ. ಬಲವಂತದಿಂದ ಯಾರನ್ನೂ ಓದಿಸಲು ಸಾಧ್ಯವಿಲ್ಲ. ಓದಿನಿಂದಲೇ ನಿಜವಾದ ಖುಷಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಒಳ್ಳೆಯ ಗುರುಗಳಾಗಿ ಗೆಲ್ಲಬೇಕೇ ಹೊರತು, ಜಾತಿ, ಶ್ರೀಮಂತಿಕೆ, ಕಾರು,ಬಂಗಲೆಗಳ ಮೂಲಕ ಉತ್ತಮ ಶಿಕ್ಷಣ ಸಾಧ್ಯವಿಲ್ಲ ಎಂದರು.ನಾವು ೨೦ ಕಡೆ ಓದಿ, ೧೬ ಕಡೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡ ಅವರು, ಕರಾವಳಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು. ಎಲ್ಲ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಒಳ್ಳೆಯ ಪಾಠ ಮಾತ್ರ. ಕೆಲ ಪ್ರದೇಶಗಳಲ್ಲಿ ಶಿಕ್ಷಕರಿಂದ ಭಯೋತ್ಪಾದನೆಯಂತಹ ವರ್ತನೆ ನಡೆಯುತ್ತಿರುವುದು ಕಂಡುಬಂದಿದ್ದು, ಇದು ಕೆಲ ಶಿಕ್ಷಕರಿಗೂ ಕೆಲ ವಿದ್ಯಾರ್ಥಿಗಳಿಗೂ ಅನ್ವಯಿಸಬಹುದು ಈ ಬಗ್ಗೆ ಗಂಭೀರ ಗಮನ ಅಗತ್ಯ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ತಮಗೆ ಆಳವಾದ ಅರಿವು ಇದೆ. ೩೯ ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪಾವಿತ್ರ್ಯತೆಯಿಂದ ನಿರ್ವಹಿಸಿದ್ದೇನೆ. ನಾವು ಬೇರೆಯವರ ಅವಕಾಶ ಕಿತ್ತುಕೊಳ್ಳಬಾರದು. ನೈತಿಕತೆ ಪಾಠ ಹೇಳುವುದರಲ್ಲಿ ಮಾತ್ರವಲ್ಲ, ಜೀವನದಲ್ಲಿ ಅನುಸರಿಸುವುದರಲ್ಲಿ ಇರಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಹಲವಾರು ಶಿಕ್ಷಕರು ಕೃಷಿ, ಫಾರ್ಮ್ಹೌಸ್ಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಪಾಠಕ್ಕೆ ಸಮಯ ಕೊಡುವುದು ಕಡಿಮೆಯಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು. ಹಳ್ಳಿಗಳಲ್ಲಿನ ಸರಕಾರಿ ಶಾಲೆಗಳು ಕಣ್ಣೆದುರೇ ಮುಚ್ಚುತ್ತಿದ್ದು, ‘ಮ್ಯಾಗ್ನೆಟ್ ಶಾಲೆಗಳು’ ಸಣ್ಣ ಶಾಲೆಗಳನ್ನು ನುಂಗುತ್ತಿರುವುದು ಸಣ್ಣ ಮೀನು ದೊಡ್ಡ ಮೀನಿಂದ ನುಂಗಲ್ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಶಿಕ್ಷಣವನ್ನು ನಾವು ಸ್ವತಃ ಪಡೆಯಬೇಕು. ತಂದೆತಾಯಿ ಪಡುವ ಕಷ್ಟದ ಅರಿವು ಇದ್ದರೆ ಮಕ್ಕಳು ಖಂಡಿತವಾಗಿ ಓದುತ್ತಾರೆ ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಲತಾಕುಮಾರಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಜಾಗತಿಕ ಶಿಕ್ಷಣ ಪರಿಕಲ್ಪನೆ, ಭಾಷಾ ಚಿಂತನೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳನ್ನು ಆಧಾರವಾಗಿಸಿಕೊಂಡು ರಚಿಸಲಾದ ಡಾ. ಆರ್. ಓಬಳೇಶಘಟ್ಟಿಯವರ ನಾಲ್ಕು ಬೃಹತ್ ಕೃತಿಗಳನ್ನು ನಾಲ್ಕು ಜನ ಮುಖ್ಯ ಅತಿಥಿಗಳು ಲೋಕಾರ್ಪಣೆಗೊಳಿಸಿದರು. ನಾಲ್ಕು ಬೃಹತ್ ಕೃತಿಗಳ ಬರಹಗಾರರಾದ ಲೇಖಕ ಡಾ. ಆರ್. ಓಬಳೇಶಘಟ್ಟಿಯವರ ಸಂಪುಟ-೧: ಭಾರತದಲ್ಲಿ ಶಿಕ್ಷಣ ಕೃತಿಯನ್ನು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎನ್. ಪ್ರಹ್ಲಾದ್, ನಮ್ಮ ಸಂವಿಧಾನ ಮತ್ತು ನಮ್ಮ ಸರ್ಕಾರಗಳು ಕೃತಿಯನ್ನು ಹಾಸನದ ಸಹಾಯಕ ಆಯುಕ್ತ ಎಂ.ಬಿ. ಚನ್ನಕೇಶವ ಹಾಗೂ ಸಾರ್ಥಕ ಸಂತ ಡಾ. ಆರ್. ಓಬಳೇಶಘಟ್ಟಿ ಬದುಕು, ಬರಹ ಕೃತಿಯನ್ನು ಹಾಸನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಟಿ.ಸಿ. ತಾರಾನಾಥ್ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಮೈಸೂರು ಕಾಲೇಜಿನ ಪ್ರಾಂಶುಪಾಲ ಸಿ. ಆಂಟೋನಿ, ಲೇಖಕಿ ವಾಣಿಘಟ್ಟಿ, ವಕೀಲ ಜಿ.ಕೆ. ಸುದೀಪ್, ವಿಶ್ರಾಂತ ಪ್ರಾಧ್ಯಾಪಕ ಎಸ್.ಪಿ. ಪದ್ಮಪ್ರಸಾದ್, ಹಿರಿಯ ಪತ್ರಕರ್ತರಾದ ಲೀಲಾವತಿ, ಆರ್. ಪಿ. ವೆಂಕಟೇಶಮೂರ್ತಿ, ಎಚ್.ಬಿ. ಮದನಗೌಡ, ಉದಯರವಿ, ರವಿ ನಾಕಲಗೂಡು, ಮೋಹನ್ ಕುಮಾರ್, ಮಿನಿವರ್ಗೀಸ್, ದೇವರಾಜು, ನಂಜುಂಡಪ್ಪ, ವಿಶ್ರಾಂತ ಪ್ರಾಧ್ಯಾಪಕ ಹಂಪನಹಳ್ಳಿ ಕಾಳೇಗೌಡ, ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟದ ಸಂಚಾಲಕ ತೊರಹಳ್ಳಿ ನಿಂಗರಾಜ್ ಇತರರು ಉಪಸ್ಥಿತರಿದ್ದರು. ಆಕಾಶವಾಣಿ ನಿರೂಪಕಿ ಸುಜಲಾದೇವಿ ಕಾರ್ಯಕ್ರಮ ನಿರ್ವಹಿಸಿದರು.