ಸಾರಾಂಶ
ತೀರ್ಥಹಳ್ಳಿ: ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದಿರುವ ಸಾಮಾಜಿಕ ಅರಣ್ಯೀಕರಣ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಕಾಡು ಪ್ರಾಣಿಗಳ ದಾಳಿಯನ್ನು ನಿಯಂತ್ರಿಸುವಲ್ಲಿ ಸಹಕಾರಿಯೂ ಆಗಿದೆ ಎಂದು ತೀರ್ಥಹಳ್ಳಿ ವಲಯಾರಣ್ಯಾಧಿಕಾರಿ ಸಂಜಯ್ ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ತೀರ್ಥಹಳ್ಳಿ ತಾಲೂಕು ಬಸವಾನಿ ಸಮೀಪದ ಶುಂಠಿಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿಲ್ಲಿ ಸುಮಾರು 500ಕ್ಕೂ ಹಣ್ಣಿನ ಗಿಡಗಳನ್ನು ನೆಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.ಪರಿಸರ ನಾಶದಿಂದಾಗಿ ಆನೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳು ಜನರ ಭಯವೇ ಇಲ್ಲದಂತೆ ನಗರ ಪ್ರದೇಶಗಳಿಗೂ ದಾಳಿ ಇಡುವುದಕ್ಕೆ ಪ್ರಾರಂಭವಾಗಿದೆ. ಅರಣ್ಯ ಇಲಾಖೆಗೆ ಇವುಗಳ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಪಡೆಯಲು ಅರಣ್ಯ ರಕ್ಷಣೆಯಿಂದ ಮಾತ್ರವೇ ಸಾಧ್ಯ. ಪರಿಸರದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿಯೂ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರದೇಶಿಕ ನಿರ್ದೆಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಡಾ.ವೀರೇಂದ್ರ ಹೆಗ್ಡೆಯವರ ಚಿಂತನೆಯ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ 35 ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆ ಕೂಡಾ ಅತ್ಯಂತ ಪ್ರಮುಖವಾಗಿದ್ದು, ಕಾಡಿನ ಪ್ರಾಣಿಗಳಿಗೆ ಅಹಾರ ಒದಗಿಸಬೇಕು ಎಂಬುದೇ ಯೋಜನೆಯ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.ಬಸವಾನಿ ಗ್ರಾಪಂ ಅಧ್ಯಕ್ಷೆ ಚೇತನಾ ಶ್ರೀನಾಥ್, ಉಪಾಧ್ಯಕ್ಷ ದೀಪು, ಜನಜಾಗೃತಿ ವೇದಿಕೆಯ ಸೊಪ್ಪುಗುಡ್ಡೆ ರಾಘವೇಂದ್ರ, ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ, ಮುರುಳೀಧರ ಶೆಟ್ಟಿ, ಸುರೇಶ್ ಶೆಟ್ಟಿ,ಯೋಜನಾಧಿಕಾರಿ ನಾಗರಾಜ ಕುಲಾಲ್ ಮತ್ತು ಮಮತಾ ಶೆಟ್ಟಿ ಇದ್ದರು.
.