ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಪ್ರತಿಭಾವಂತರಿಗೆ ಪುರಸ್ಕಾರ ನೀಡುವುದರಿಂದ ಪ್ರೋತ್ಸಾಹ ಹೆಚ್ಚಿ, ಸಮಾಜದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಯುವ ಪೀಳಿಗೆಯ ಸಾಧನೆಗೆ ಗೌರವಿಸುವುದರಿಂದ ಇತರರಿಗೂ ಇದರಿಂದ ಪ್ರೇರಣೆ, ಪ್ರೋತ್ಸಾಹ ಸಿಕ್ಕಿ ಸಮಾಜದ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ಪ್ರತಿಭೆಗೆ ಪುರಸ್ಕಾರ ನೀಡುವ ಮಹಾಸಭೆಯ ಕಾರ್ಯ ಮಾದರಿಯಾಗಿದೆ. ಇಂದು ಎಲ್ಲಾ ಸಮುದಾಯದವರು ಈ ಮಾರ್ಗವನ್ನು ಅನುಸರಿಸುತ್ತಿರುವುದು ಮೆಚ್ಚುವಂತದ್ದು, ವೀರಶೈವ ಸಮಾಜ ಎಂದಿನಿಂದಲೂ ಎಲ್ಲ ಸಮುದಾಯದ ಪ್ರತಿಭಾವಂತರಿಗೆ ಗುರುತಿಸುವ ಕಾರ್ಯ ಮಾಡುತ್ತಲೇ ಬಂದಿದೆ. ಜಾಗೃತಿ ಮೂಡಿಸುವ ಕಾರ್ಯ ನಿರಂತರ ಮಾಡುತ್ತಾ ಬಂದಿದೆ ಎಂದು ಹೇಳಿದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ಅಧ್ಯಕ್ಷತೆ ವಹಿಸಿದ್ದರು. ತಾಲೂಕಾಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ ಜಗನ್ನಾಥ, ವೀರಶೈವ ಸಮಾಜ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ಮಹೇಶ ಆನೆಗುಂದಿ, ಮಹಿಪಾಲರೆಡ್ಡಿ ಇತರರಿದ್ದರು. ನಿವೃತ್ತ ಇಂಜಿನಿಯರ್ ಬಂಡೆಪ್ಪ ಆಕಳ ಸ್ವಾಗತಿಸಿದರು. ಡಾ.ಸಿದ್ದರಾಜರೆಡ್ಡಿ ನಿರೂಪಿಸಿದರು. ಮಹೇಶ ಹಿರೇಮಠ ವಂದಿಸಿದರು.ವೀರಶೈವ ಮಹಾಸಭಾ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ : ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಲ್ಲವಿ ಸುಧಾಕರ ರಾಷ್ಟ್ರಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಹಿನ್ನೆಲೆ ಅವರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು.