ಸಾರಾಂಶ
ವಚನ, ದಾಸ ಸಾಹಿತ್ಯ, ತತ್ವಪದಗಳು ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಮಾಜ ಸುಧಾರಣೆ ಕಾರ್ಯ ಮಾಡಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸೃಜನಶೀಲ ಸಾಹಿತ್ಯವು ಸಾಮಾಜಿಕ ಬದಲಾವಣೆಗೆ ಹಲವಾರು ಆಯಾಮ ತೆರೆದುಕೊಂಡಿದೆ. ಸಮಾಜದ ಸರ್ವರಂಗಗಳು ದಾರಿ ತಪ್ಪಿದಾಗ ಅದಕ್ಕೆ ಮೊದಲು ಪ್ರತಿಕ್ರಿಯೆ ನೀಡುವುದೇ ಸೃಜನಶೀಲ ಸಾಹಿತ್ಯವೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸಂಚಾಲಕರಾದ ಡಾ. ಬಸವರಾಜ ಕಲ್ಗುಡಿ ತಿಳಿಸಿದರು.ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ಸ್ನಾತಕೋತರ ಕೇಂದ್ರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಹಯೋಗದಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪ್ರಾಚೀನ ಕಾಲದಿಂದಲೂ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುತ್ತಾ ಬಂದಿದೆ. ವಚನ, ದಾಸ ಸಾಹಿತ್ಯ, ತತ್ವಪದಗಳು ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಮಾಜ ಸುಧಾರಣೆ ಕಾರ್ಯ ಮಾಡಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ಒಳ್ಳೆಯ ನಾಗರಿಕರನ್ನು ನಿರ್ಮಿಸುವಲ್ಲಿ ಸಾಹಿತ್ಯ ಅಂತರ್ಗಾಮಿನಿಯಂತೆ ಕೆಲಸ ಮಾಡುತ್ತದೆ. ಅಂತರಾತ್ಮದ ವಿಮರ್ಶೆ ಮಾಡಿಕೊಳ್ಳುತ್ತ ವ್ಯಕ್ತಿ, ಕುಟುಂಬ ಹಾಗೂ ಸಮಾಜಗಳ ನಡುವೆ ಸಮನ್ವಯತೆಯನ್ನು ಸೃಜನಶೀಲ ಸಾಹಿತ್ಯ ಸಾಧಿಸಿಕೊಂಡು ಬಂದಿದೆಯಂದರು.
ಗೌರವ ಉಪಸ್ಥಿತರಿದ್ದ ಅಭಿನಂದನಾ ಪರ ನುಡಿಗಳನ್ನಾಡಿದ ಡಾ.ವಿ.ಎಸ್.ಕಟಗಿಹಳ್ಳಿಮಠ ಸೃಜನಶೀಲ ಸಾಹಿತ್ಯದ ವೈಶಿಷ್ಟತೆಗಳ ಬಗ್ಗೆ ಮಾತನಾಡಿದರು. ಪ್ರಾಚಾರ್ಯ ಎಸ್.ಆರ್.ಮೂಗೂನೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮಾನಸಿಕ ತುಮುಲುಗಳಿಗೆ ಔಷಧ ನೀಡುವ ಸಾಮರ್ಥ್ಯ ಹೊಂದಿದೆ. ಓದುಗ ಎಂದೂ ಒಂಟಿಯಲ್ಲ ಬಹುಮುಖ ಆಯಾಮದ ಬಹುಮುಖ ವ್ಯಕ್ತಿತ್ವಕ್ಕೆ ಸಾಹಿತ್ಯ ಪೂರಕವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸಂಚಾಲಕರಾಗಿ ಹಾಗೂ ಸದಸ್ಯರಾಗಿ ಆಯ್ಕೆಯಾದ ಡಾ. ಬಸವರಾಜ ಕಲ್ಗುಡಿ ಹಾಗೂ ಡಾ.ವಿ.ಎಸ್.ಕಟಗಿಹಳ್ಳಿಮಠವರನ್ನು ಮಹಾವಿದ್ಯಾಲಯದಿಂದ ಗೌರವಿಸಲಾಯಿತು. ಸಂಯೋಜಕ ಡಾ.ಕೆ.ವಿ.ಮಠ, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಥೋಡ, ಡಾ.ಕೆ.ಕೆಂಪೇಗೌಡ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.