ಸಾರಾಂಶ
ಕಾಯಕ ಶರಣರ ಜಯಂತಿ । ಕಾರಯಕದೊಂದಿಗೆ ವಚನ ಮೂಲಕ ಸಮಾಜಕ್ಕೆ ಕೊಡುಗೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದಂತೆ ಬದುಕಿದವರು. ತಮ್ಮ ಕಾಯಕ ನಿಷ್ಟೆಯ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ ಶರಣರು ಕೇವಲ ತಮ್ಮ ಉದ್ಧಾರಕ್ಕಾಗಿ ಅಲ್ಲ. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದವರು. ಕಾಯಕದ ಮೂಲತತ್ವ ಅರಿತು ಕಾರ್ಯವೆಸಗಿದವರು ಈ ಕಾಯಕ ಶರಣರು. 12ನೇ ಶತಮಾನ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಯುಗ. ಕಾಯಕ ಶರಣು ಸೇರಿದಂತೆ ಶರಣರು ತಮ್ಮ ವೃತ್ತಿ ಜೊತೆಗೆ ಸಮಾಜ ಸುಧಾರಕರಾಗಿ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಕಾಯಕ ಮಾಡುತ್ತ ಅದಕ್ಕೆ ಪೂರಕವಾಗಿ ವಚನ ಬರೆಯುತ್ತ. ಜನರಿಗೆ ತಿಳುಸುತ್ತ ಹೋದ ಸಾಧಕರು. ಇಂತಹ ವಚನಗಳನ್ನು, ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ತುಳಿತಕ್ಕೊಳಗಾದ ಸಮಾಜದ ಏಳ್ಗೆಗೆ ಶ್ರಮಿಸಿದವರು, ಸಮಾಜದಲ್ಲಿನ ಅಂಕು ಡೊಂಕು ತಿದ್ದಿದವರು, ಕಾಯಕವೇ ಶ್ರೇಷ್ಠ ಎಂದು ಸಾರಿದವರು ಕಾಯಕ ಶರಣರು ಎಂದರು.
ಕಾಯಕದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದವರು. ಜಾತಿ, ಮತ ಮೀರಿ ಮುಂದೆ ಸಾಗಬೇಕೆಂದು ತಿಳಿಸಿದ ಐದು ಕಾಯಕ ಶರಣರ ಜಯಂತಿ ಅರ್ಥಪೂರ್ಣ ವಾಗಲಿ ಎಂದರು.ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಉಪನ್ಯಾಸ ನೀಡಿ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ, ಗುಡ್ಡಯ್ಯ ಇನ್ನೂ ಮುಂತಾದ ಶರಣರು ತಳ ಸಮುದಾಯದ ಪ್ರತಿನಿಧಿಗಳು. ವಿವಿಧ ವರ್ಗಗಳಿಂದ ಬಂದ ಇವರು ವಿವಿಧ ಕಾಯಕದಲ್ಲಿ ನಿಷ್ಠರಾಗಿ ದುಡಿಯುತ್ತ, ಕಾಯಕದ ಮೂಲಕ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದವರು ಎಂದರು.
12 ನೇ ಶತಮಾನ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಹೋರಾಟದ ಮಹತ್ವವನ್ನು ತೋರಿದ ಸಮಯವಾಗಿದೆ. ಬಹುತೇಕ ಎಲ್ಲ ವಚನಗಳಲ್ಲಿ ನಾವು ಬಹಳ ಮುಖ್ಯವಾಗಿ ಹಸಿವು, ಬಡತನ ಮತ್ತು ಆಧ್ಯಾತ್ಮಿಕ ಪರಿವರ್ತನೆಯನ್ನು ಕಾಣಬಹುದು ಎಂದರು.ವಚನ ಸಾಹಿತ್ಯ ನಮ್ಮ ಸಮಾಜಕ್ಕೆ ಒಂದು ವಿಶೇಷ ಕೊಡುಗೆ. ಸ್ಥಾವರ ಸಂಸ್ಕೃತಿಯನ್ನು ಅಂದಿನ ಬಸವಾದಿ ಶರಣರು ವಿರೋಧಿಸಿದ್ದರು. ಅದನ್ನು ಇಂದು ವಿಜೃಂಭಿಸಲಾಗುತ್ತಿದೆ. ಅದರರ್ಥ ವಚನಗಳನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೆಂದು ತೋರುತ್ತದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಕಾಯಕಕ್ಕೆ ಯಾವುದೇ, ಜಾತಿ ಧರ್ಮ ಇಲ್ಲ. ಮನಃಪೂರ್ತಿಯಾಗಿ, ಜೀವನದ ಅಭಿವೃದ್ಧಿಗಾಗಿ ಮಾಡುವುದೇ ಕಾಯಕ. ಕಾಯಕಕ್ಕೆ ನಿಷ್ಟರಾಗಿರಬೇಕು, ದುಡಿದು ತಿನ್ನಬೇಕೆಂದು ಸಾರಿದವರು ಕಾಯಕ ಶರಣರು. ಸಮಾಜದಲ್ಲಿ ಶ್ರಮಜೀವಿಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಶ್ರಮಜೀವಿಗಳ ಅಭಿವೃದ್ಧಿ ಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ಕಾಯಕ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಏಳ್ಗೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಸಮಗಾರ ಸಮಾಜದ ಕೆ.ಎನ್. ಅಶೋಕಕುಮಾರ್ ಹರಳಯ್ಯನವರ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸ್ವಾಗತಿಸಿದರು. ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.